ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವಿಡಿಯೊ ವೈರಲ್ ಆದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಆಮ್ ಆದ್ಮಿ ಪಕ್ಷ ಅದು ಮಸಾಜ್ ಅಲ್ಲ.. ಥೆರಪಿ ಎಂದು ಹೇಳಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಜೈಲಿನಲ್ಲಿರುವ ದೆಹಲಿ ಸಚಿವ ಮತ್ತು ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆದರೆ ಅದು ಮಸಾಜ್ ಸೇವೆಯಲ್ಲ.. ಅದೊಂದು ರೀತಿಯ ಥೆರಪಿ.. ಅವರ ಬೆನ್ನು ಮೂಳೆಗೆ ಹಾನಿಯಾಗಿದ್ದು ಇದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಜೈಲಿನ ದಾಖಲೆಗಳಲ್ಲೇ ಮಾಹಿತಿ ಇದೆ. ಗಾಯಗೊಂಡ ವ್ಯಕ್ತಿಯ ಚಿಕಿತ್ಸೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡುವ ಮೂಲಕ ಬಿಜೆಪಿ ಮಾತ್ರ ಕ್ರೂರ ಹಾಸ್ಯಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಇಷ್ಟಕ್ಕೂ ವಿಡಿಯೋದಲ್ಲೇನಿದೆ?
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವಿಡಿಯೊ ವೈರಲ್ ಆಗಿತ್ತು. ಜೈನ್ ಕೆಲ ದಿನಪತ್ರಿಕೆಗಳನ್ನು ಓದುತ್ತಾ ಮಲಗಿದ್ದು, ಒಬ್ಬ ವ್ಯಕ್ತಿ ಅವರ ಕಾಲುಗಳಿಗೆ ಮಸಾಜ್ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ವಿವಾದವೇನು?
ಸತ್ಯೇಂದ್ರ ಜೈನ್ ಅವರಿಗೆ ವಿಶೇಷ ಆತಿಥ್ಯ ನೀಡಿದ ಆರೋಪ ಸಂಬಂಧ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅವರನ್ನು ಸೋಮವಾರ ಅಮಾನತು ಮಾಡಲಾಗಿತ್ತು. .ತಿಹಾರ್ ಜೈಲಿನಲ್ಲಿ ಜೈನ್ ಅವರಿಗೆ ವಿಶೇಷ ಆತಿಥ್ಯ ಲಭ್ಯವಾಗುತ್ತಿದೆ ಎಂದು ಕಳೆದವಾರ ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಈ ಮಧ್ಯೆ ವಿಡಿಯೊ ಬಹಿರಂಗಗೊಂಡಿರುವುದು ಆರೋಪಕ್ಕೆ ಇಂಬು ನೀಡಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವರಿಗೆ ಜೈಲು
ಸತ್ಯೇಂದ್ರ ಜೈನ್ ಹಾಗೂ ಅವರ ಪತ್ನಿ ಪೂನಂ ಜೈನ್ ಸೇರಿದಂತೆ ಇತರರ ವಿರುದ್ಧ, 2017ರಲ್ಲಿ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಜೈನ್ ಅವರನ್ನು ಬಂಧಿಸಲಾಗಿತ್ತು. ದೆಹಲಿಯ ಆರೋಗ್ಯ, ಕೈಗಾರಿಕೆ, ವಿದ್ಯುತ್, ಗೃಹ, ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರಾಗಿ ಜೈನ್ ಕಾರ್ಯ ನಿರ್ವಹಿಸುತ್ತಿದ್ದರು. ಜೈನ್ ಮತ್ತು ಅವರ ಕುಟುಂಬದ ಒಡೆತನದ ಕಂಪೆನಿಗಳಿಗೆ ಸೇರಿದ ₹ 4.81 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇ.ಡಿ ಮಾರ್ಚ್ 31ರಂದು ವಶಕ್ಕೆ ಪಡೆದಿತ್ತು.
Advertisement