ದೆಹಲಿ: ಬೊಗಳಿದ್ದಕ್ಕೆ ಗರ್ಭಿಣಿ ನಾಯಿಯ ಹೊಡೆದು ಕೊಂದಿದ್ದ 4 ಮಂದಿ ಬಂಧನ

ಬೊಗಳಿತು ಎಂಬ ಒಂದೇ ಕಾರಣಕ್ಕೆ ಗರ್ಭಿಣಿ ನಾಯಿಯ ಹೊಡೆದು ಕೊಂದಿದ್ದ 4 ಮಂದಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ನಾಯಿ ಕೊಂದ ಆರೋಪಿಗಳು
ನಾಯಿ ಕೊಂದ ಆರೋಪಿಗಳು

ನವದೆಹಲಿ: ಬೊಗಳಿತು ಎಂಬ ಒಂದೇ ಕಾರಣಕ್ಕೆ ಗರ್ಭಿಣಿ ನಾಯಿಯ ಹೊಡೆದು ಕೊಂದಿದ್ದ 4 ಮಂದಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಬೊಗಳಿತು ಎನ್ನುವ ಕಾರಣಕ್ಕೆ ಗರ್ಭಿಣಿ ಶ್ವಾನವನ್ನು ಅಮಾನವೀಯವಾಗಿ ಥಳಿಸಿ ಕೊಂದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ದೆಹಲಿ ‍ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ನ್ಯೂ ಫ್ರೆಂಡ್ಸ್‌ ಕಾಲೊನಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಇಲ್ಲಿನ ನಿವಾಸಿಗಳಾದ ಅವಿನಾಶ್‌ ಮಿಂಜ್‌ (24), ಉತ್ತರಾಖಂಡ್‌ನ ಅನಿಶ್‌ ಹೊರ್ಹೋರಿಯಾ (18) ಜಾರ್ಖಂಡ್‌ನ ರಾಹುಲ್‌ ಕುಜುರ್‌ (19) ಹಾಗೂ ಉತ್ತರ ಪ್ರದೇಶದ ಗುರುವಚನ್‌ (19) ಅಮಾನುಷವಾಗಿ ನಾಯಿಯನ್ನು ಅಟ್ಟಾಡಿಸಿ ಹೊಡೆದು ಕೊಂದಿದ್ದರು.

ಏನಿದು ವೈರಲ್ ವಿಡಿಯೋ?
ಗುಂಪೊಂದು ಗರ್ಭಿಣಿ ಶ್ವಾನವನ್ನು ಥಳಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಕ್ರೌರ್ಯಕ್ಕೆ ಭಾರೀ ಖಂಡನೆಯೂ ವ್ಯಕ್ತವಾಗಿತ್ತು. ಬೇಸ್‌ಬಾಲ್‌ ಬ್ಯಾಟ್‌, ಕೋಲು ಹಾಗೂ ಕಬ್ಬಿಣದ ರಾಡ್‌ಗಳಿಂದ ಶ್ವಾನವನ್ನು ಥಳಿಸಿ, ಗಹಗಹಿಸಿ ನಗುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.  ಅಲ್ಲದೇ ಸತ್ತ ಶ್ವಾನದ ಕಾಲು ಹಿಡಿದು, ಮೈದಾನದ ತುಂಬಾ ಎಳೆದುಕೊಂಡು ಹೋಗುವ ದೃಶ್ಯಗಳೂ ವಿಡಿಯೊದಲ್ಲಿ ದಾಖಲಾಗಿತ್ತು. ಈ ವೇಳೆಯಲ್ಲಿ ಶ್ವಾನ ಪ್ರಜ್ಞೆ ತಪ್ಪಿದಂತೆ ಕಂಡು ಬರುತ್ತಿತ್ತು.

ದೆಹಲಿಯ ನ್ಯೂ ಫ್ರೆಂಡ್ಸ್‌ ಕಾಲೊನಿಯಲ್ಲಿ ಈ ಘಟನೆ ನಡೆದಿದ್ದು, ಆಟವಾಡುವ ವೇಳೆ ನಾಯಿ ಬೊಗಳಿದ್ದಕ್ಕೆ ಥಳಿಸಿದೆವು ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಬಂಧಿತ ನಾಲ್ಕು ಮಂದಿಯೂ ಓಖ್ಲಾದ, ಡಾನ್‌ ಬಾಸ್ಕೋ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com