ಮಲಬಾರ್: ಕಾಂಗ್ರೆಸ್ ಸಂಸದ ಶಶಿ ತರೂರ್ ಮಲಬಾರ್ ಪ್ರವಾಸದಲ್ಲಿದ್ದು, ಯುಡಿಎಫ್- ಮಿತ್ರ ಪಕ್ಷ ಐಯುಎಂಎಲ್ ನಾಯಕರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿಯ ಬಳಿಕ ಮಾತನಾಡಿರುವ ಶಶಿ ತರೂರ್ "ನಾನು ಯಾರಿಗೂ ಭಯಪಡುವುದಿಲ್ಲ, ನನ್ನಿಂದಲೂ ಯಾರಿಗೂ ಭಯವಿಲ್ಲ"" ಎಂಬ ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ಕೇರಳದಲ್ಲಿ ತಮ್ಮ ಪ್ರವಾಸದಿಂದ ಯಾರು ಭಯಪಟ್ಟಿದ್ದಾರೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಶಿ ತರೂರ್, "ನಾನು ಯಾರಿಗೂ ಭಯಪಡುವುದಿಲ್ಲ, ನನ್ನಿಂದಲೂ ಯಾರಿಗೂ ಭಯವಿಲ್ಲ" ಎಂದಿದ್ದಾರೆ. ಕೇರಳ ಕಾಂಗ್ರೆಸ್ ನಲ್ಲಿ ಶಶಿ ತರೂರ್ ಅವರ ಬೆಂಬಲಿಗರು ಹೆಚ್ಚಾಗುತ್ತಿದ್ದು, ತರೂರ್ ಗುಂಪು ಎಂದೇ ಗುರುತಿಸಿಕೊಂಡಿರುವುದು ರಾಜ್ಯಮಟ್ಟದ ನಾಯಕತ್ವದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂಬ ವಿಶ್ಲೇಷಣೆಗಳ ನಡುವೆ ಶಶಿ ತರೂರ್ ನಡೆ ಮಹತ್ವ ಪಡೆದುಕೊಂಡಿದೆ.
ಐಯುಎಂಎಲ್ ನಾಯಕರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, ಇದೊಂದು ಸೌಹಾರ್ದಯುತ ಭೇಟಿಯಷ್ಟೇ ಎಂದು ಹೇಳಿದ್ದಾರೆ. ತಿರುವನಂತಪುರಂ ನ ಸಂಸದರಾಗಿರುವ ಶಶಿ ತರೂರ್ ಗೆ ಅವರ ಕಟ್ಟಾ ಬೆಂಬಲಿಗ ಎಂಪಿ ಎಂಕೆ ರಾಘವನ್ ಅವರು ಸಾಥ್ ನೀಡಿದ್ದರು. ತಮಗೆ ಪಕ್ಷದ ಒಳಗೇ ಗುಂಪನ್ನು ಕಟ್ಟುವ ಉದ್ದೇಶ, ಆಸಕ್ತಿ ಇಲ್ಲ ಎಂದು ಶಶಿ ತರೂರ್ ಸ್ಪಷ್ಟನೆ ನೀಡಿದ್ದಾರೆ.
ಮಲಬಾರ್ ಪ್ರವಾಸ ಕೈಗೊಂಡಿರುವ ಶಶಿ ತರೂರ್ ಗೆ ಕೇರಳದ ವಿಪಕ್ಷ ನಾಯಕ ವಿ.ಡಿ ಸತೀಶನ್ ಎಚ್ಚರಿಕೆ ನೀಡಿದ್ದು, ಈ ರೀತಿಯ ಪ್ರತ್ಯೇಕ ಚಟುವಟಿಕೆಗಳಿಗೆ ಪಕ್ಷದಲ್ಲಿ ಜಾಗವಿಲ್ಲ, ಇಂತಹ ಯಾವುದೇ ನಡೆಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಶಶಿ ತರೂರ್ ವಿಷಯವಾಗಿ ಕೇರಳ ಕಾಂಗ್ರೆಸ್ ನಲ್ಲಿ ಭಿನ್ನಮತ ಉಲ್ಬಣವಾಗಿದೆ.
Advertisement