'ಅಫ್ತಾಬ್ ನನ್ನನ್ನು ಕೊಂದು ತುಂಡು ಮಾಡಿ ಎಸೆಯುತ್ತಾನೆ': 2020ರಲ್ಲಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದ ಶ್ರದ್ಧಾ ವಾಲ್ಕರ್

ದೆಹಲಿಯ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟೂ ಮತ್ತಷ್ಟು ವಿಷಯಗಳು ಹೊರಬರುತ್ತಿವೆ. ಮಹಾರಾಷ್ಟ್ರದ ಪಲ್ಗರ್ ನಲ್ಲಿರುವ ಟುಲಿಂಜ್ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಶ್ರದ್ಧಾ ವಾಲ್ಕರ್ ದೂರು ಸಲ್ಲಿಸಿರುವ ಪತ್ರವೊಂದು ಈಗ ಮುನ್ನೆಲೆಗೆ ಬಂದು ಭಾರೀ ಸದ್ದು ಮಾಡುತ್ತಿದೆ.
ಶ್ರದ್ಧಾ ವಾಲ್ಕರ್
ಶ್ರದ್ಧಾ ವಾಲ್ಕರ್
Updated on

ಮುಂಬೈ: ದೆಹಲಿಯ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟೂ ಮತ್ತಷ್ಟು ವಿಷಯಗಳು ಹೊರಬರುತ್ತಿವೆ. ಮಹಾರಾಷ್ಟ್ರದ ಪಲ್ಗರ್ ನಲ್ಲಿರುವ ಟುಲಿಂಜ್ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಶ್ರದ್ಧಾ ವಾಲ್ಕರ್ ದೂರು ಸಲ್ಲಿಸಿರುವ ಪತ್ರವೊಂದು ಈಗ ಮುನ್ನೆಲೆಗೆ ಬಂದು ಭಾರೀ ಸದ್ದು ಮಾಡುತ್ತಿದೆ. ಅದರಲ್ಲಿ ಅಫ್ತಾಬ್ ತನಗೆ ಹೊಡೆಯುತ್ತಿದ್ದು ಕೊಲ್ಲುವುದಾಗಿ ಕೂಡ ಬೆದರಿಕೆ ಹಾಕಿದ್ದಾನೆ ಎಂದು ಶ್ರದ್ಧಾ ದೂರು ನೀಡಿದ್ದರು.

ಈಗ ಶ್ರದ್ಧಾ ಮರ್ಡರ್ ಕೇಸು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ನಂತರ 2020ರಲ್ಲಿ ಆಕೆಯ ಜೊತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ವಸೈಯಲ್ಲಿನ ನೆರೆಮನೆಯವರು ಪತ್ರವನ್ನು ಹಂಚಿಕೊಂಡಿದ್ದಾರೆ. ಶ್ರದ್ಧಾ 2020ರ ನವೆಂಬರ್ 23ರಂದು ಟುಲಿಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದು ಶ್ರದ್ಧಾಳೇ ಬರೆದ ಪತ್ರವೆಂದು ಪೊಲೀಸರು ಸಹ ದೃಢಪಡಿಸಿದ್ದಾರೆ.

ಶ್ರದ್ಧಾ ಬರೆದಿದ್ದ ಪತ್ರದಲ್ಲಿ ಏನಿದೆ?:''ನನ್ನನ್ನು ಕೊಂದುಹಾಕುವುದಾಗಿ ಆಫ್ತಾಬ್ ಹೆದರಿಸಿದ್ದರಿಂದ ನನಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಧೈರ್ಯವಿರಲಿಲ್ಲ. ಈ ಪತ್ರ ಬರೆಯುವ ದಿನ ಆಫ್ತಾಬ್ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದ. ನಿನ್ನನ್ನು ಕೊಂದು ಹಾಕಿ ತುಂಡು ತುಂಡು ಮಾಡಿ ಎಸೆಯುತ್ತೇನೆ ಎಂದು ಕೂಡ ಹೇಳಿದ್ದ. ಕಳೆದ ಆರು ತಿಂಗಳಿನಿಂದ ನನಗೆ ಹೊಡೆಯುತ್ತಾ ಬಂದಿದ್ದಾನೆ, ಆಫ್ತಾಬ್ ನನಗೆ ಹೊಡೆಯುತ್ತಾನೆ, ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಅವನ ಪೋಷಕರಿಗೂ ಗೊತ್ತಿದೆ.

ನಾವು ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂಬ ಭರವಸೆಯಿಂದ ಇವತ್ತಿನವರೆಗೂ ಅವನ ಜೊತೆ ವಾಸಿಸುತ್ತಿದ್ದೆ. ಅವನ ಕುಟುಂಬದ ಬೆಂಬಲ ಆಶೀರ್ವಾದ ಕೂಡ ಸಿಗಬಹುದೆಂದು ನಂಬಿದ್ದೆ. ಆದರೆ ಇನ್ನು ಮುಂದೆ ಅವನ ಜೊತೆ ವಾಸಿಸಲು ನನಗೆ ಇಚ್ಛೆಯಿಲ್ಲ. ನನ್ನನ್ನು ಎಲ್ಲಿಯಾದರೂ ಕಂಡರೆ ಕೊಂದು ಹಾಕುವುದಾಗಿ ಇಲ್ಲವೇ ಹೊಡೆಯುವುದಾಗಿ ನನಗೆ ಬೆದರಿಕೆ ಹಾಕಿರುವುದರಿಂದ ಅವನಿಂದ ಶಾರೀರಿಕವಾಗಿ ತೊಂದರೆಯಾದರೂ ಆಗಬಹುದು'' ಎಂದು ಶ್ರದ್ಧಾ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ದಾಖಲಿಸಿದ್ದರು.

ನಾನು ಆ ಕ್ಷಣದ ಆವೇಶಕ್ಕೆ ಒಳಗಾಗಿ ಶ್ರದ್ಧಾಳನ್ನು ಕೊಂದೆ ಎಂದು ನಿನ್ನೆ ದೆಹಲಿ ಕೋರ್ಟ್ ನ ಎದುರು ಆಫ್ತಾಬ್ ಹೇಳಿದ ನಂತರ ಈ ಪತ್ರ ಬೆಳಕಿಗೆ ಬಂದಿದೆ. ಅಫ್ತಾಬ್ ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ನಿನ್ನೆ ದೆಹಲಿಯ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com