ಬಿಜೆಪಿ ಸೋಲಿಸದಂತೆ ಕಾಂಗ್ರೆಸ್ ಪಕ್ಷವನ್ನು ಯಾರು ತಡೆದರು? ಕಾಂಗ್ರೆಸ್ ಅಸಮರ್ಥತೆಯಿಂದ 3 ದಶಕದಿಂದ ಬಿಜೆಪಿ ಕೈಯ್ಯಲ್ಲಿ ಗುಜರಾತ್: ಓವೈಸಿ
ಬಿಜೆಪಿಯನ್ನು ಸೋಲಿಸದಂತೆ ಕಾಂಗ್ರೆಸ್ ಅನ್ನು ಯಾರು ತಡೆದರು, ಸುಮಾರು ಮೂರು ದಶಕಗಳಿಂದ ಅವರನ್ನು ಸೋಲಿಸಲು ಅವರು ಏಕೆ ವಿಫಲರಾಗಿದ್ದರು? ಈ ಪ್ರಶ್ನೆಗೆ ಮೊದಲು ಕಾಂಗ್ರೆಸ್ ಉತ್ತರಿಸಬೇಕು ಎಂದಿದ್ದಾರೆ.
Published: 26th November 2022 01:54 PM | Last Updated: 19th December 2022 11:22 AM | A+A A-

ಅಸಾದುದ್ದೀನ್ ಓವೈಸಿ
ಕಛ್: ಬಿಜೆಪಿಯನ್ನು ಸೋಲಿಸದಂತೆ ಕಾಂಗ್ರೆಸ್ ಪಕ್ಷವನ್ನು ಯಾರು ತಡೆದರು? ಸುಮಾರು ಮೂರು ದಶಕಗಳಿಂದ ಬಿಜೆಪಿ ಸೋಲಿಸಲು ಕಾಂಗ್ರೆಸ್ ಏಕೆ ವಿಫಲವಾಗಿದೆ, ಈ ಪ್ರಶ್ನೆಗೆ ಮೊದಲು ಕಾಂಗ್ರೆಸ್ಸಿಗರು ಉತ್ತರಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಿಟಿಐ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಸಮರ್ಥತೆಯಿಂದ ಕಳೆದ 27 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಮುಂದಿನ ತಿಂಗಳು ನಡೆಯು ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತಗಳನ್ನು ಎಐಎಂಐಎಂ ಪಕ್ಷ ವಿಭಜಿಸಲಿದೆ ಎಂಬ ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದರು.
ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ಪ್ರಚಾರದ ಸಮಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ಮೆಹ್ರೌಲಿ ಕೊಲೆ ಪ್ರಕರಣದಂತಹ ವಿಷಯಗಳನ್ನು ಎತ್ತುವ ಮೂಲಕ "ಮುಸ್ಲಿಂ ವಿರೋಧಿ ನೀತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಪಕ್ಷವು ಕಚ್ ನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು ಎಐಎಂಐಎಂ ವೋಟ್ ಕಟ್ಟರ್ ಪಕ್ಷ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ತನ್ನ ಅಸಮರ್ಥತೆಯನ್ನು ಮುಚ್ಕಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾಡುತ್ತಿದೆ, ಕಳೆದ 27 ವರ್ಷಗಳಿಂದ ಗುಜರಾತ್ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಕಾಂಗ್ರೆಸ್ ಮಾತ್ರ ವಿರೋಧ ಪಕ್ಷವಾಗಿತ್ತು. ಬಿಜೆಪಿಯನ್ನು ಸೋಲಿಸದಂತೆ ಕಾಂಗ್ರೆಸ್ ಅನ್ನು ಯಾರು ತಡೆದರು, ಸುಮಾರು ಮೂರು ದಶಕಗಳಿಂದ ಅವರನ್ನು ಸೋಲಿಸಲು ಅವರು ಏಕೆ ವಿಫಲರಾಗಿದ್ದರು? ಈ ಪ್ರಶ್ನೆಗೆ ಮೊದಲು ಕಾಂಗ್ರೆಸ್ ಉತ್ತರಿಸಬೇಕು ಎಂದಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಎಐಎಂಐಎಂ ಎರಡನ್ನೂ ಬಿಜೆಪಿಯ ಬಿ-ಟೀಮ್ಗಳು ಎಂದು ಕಾಂಗ್ರೆಸ್ ಆರೋಪಿಸಿದೆ. "ನಾವು ಯಾರ ಮತ ಹಂಚಿಕೆಯನ್ನು ತಿನ್ನಲು ಬಂದಿಲ್ಲ. ನಾವು ಬಿಜೆಪಿ ವಿರುದ್ಧ ಹೋರಾಡಲು ಬಂದಿದ್ದೇವೆ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು 182 ಸ್ಥಾನಗಳಲ್ಲಿ 13 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
"ಕಾಂಗ್ರೆಸ್ 169 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಲಿ, ಗುಜರಾತ್ನಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಓವೈಸಿ ಆರೋಪಿಸಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸೋಲನ್ನು ಉಲ್ಲೇಖಿಸಿ, ಇದು "ಸೆಟ್ಟಿಂಗ್" (ರಹಸ್ಯ ಒಪ್ಪಂದ) ಎಂದು ಹೇಳಿದ್ದಾರೆ.
ಎಐಎಂಐಎಂ ಬಿಜೆಪಿಯೊಂದಿಗೆ 'ಸೆಟ್ಟಿಂಗ್' ಮಾಡಿಕೊಂಡಿದೆ ಎಂದು ಆರೋಪಿಸಿದರೆ, ಕಾಂಗ್ರೆಸ್ ಬಗ್ಗೆ ನಾವೂ ಅದನ್ನೇ ಹೇಳಬಹುದು. ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೊಂದಾಣಿಕೆಗೆ ಉದಾಹರಣೆಯೇ? ಎಂದು ಪ್ರಶ್ನಿಸಿದ್ದಾರೆ, ಎಐಎಂಐಎಂ ಇತರ ರಾಜಕೀಯ ಪಕ್ಷಗಳಂತೆ ಗುಜರಾತ್ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ ಎಂದು ಅವರು ಹೇಳಿದರು. ಗುಜರಾತಿನಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಪಕ್ಷ ಪ್ರವೇಶಿಸುತ್ತಿದೆ ಎಂದು ತಿಳಿಸಿದ್ದಾರೆ.
"ನಾವು ಆರಂಭದಲ್ಲಿ 14 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು, ಆದರೆ ನಮ್ಮ ಅಭ್ಯರ್ಥಿಯೊಬ್ಬರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಆದ್ದರಿಂದ ನಾವು ಈಗ 13 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ನಾನು ಜನರ ಬೆಂಬಲವನ್ನು ಪಡೆಯುವ ವಿಶ್ವಾಸ ಮತ್ತು ಭರವಸೆ ಹೊಂದಿದ್ದೇನೆ" ಎಂದು ಸಂಸದ ಓವೈಸಿ ಹೇಳಿದ್ದಾರೆ.
ಎಐಎಂಐಎಂ ಸ್ಪರ್ಧಿಸುತ್ತಿರುವ ಸ್ಥಾನಗಳು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಾಗಿವೆ, ಅವುಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಭದ್ರಕೋಟೆಗಳಾಗಿವೆ. ಬಿಜೆಪಿಯು "ಮುಸ್ಲಿಂ ವಿರೋಧಿ ನಿರೂಪಣೆ" ಯನ್ನು ಸೃಷ್ಟಿಸುವ ಮೂಲಕ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಓವೈಸಿ, ಪ್ರಚಾರದ ಸಮಯದಲ್ಲಿ ಯುಸಿಸಿ ವಿಷಯವನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.