ಕೊಟ್ಟಾಯಂ: ಚಂಗನಾಶ್ಶೇರಿಯಲ್ಲಿ ಮಲಯಾಳಂ ಸಿನಿಮಾ ‘ದೃಶ್ಯಂ’ ಮಾದರಿಯಲ್ಲಿ ಯೋಜನೆ ರೂಪಿಸಿ ಕೊಲೆ ಮಾಡಿ ಶವ ಹೂತು ಹಾಕಿದ್ದ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು 43 ವರ್ಷದ ಬಿಂದುಮೋನ್ ಎಂದು ಗುರುತಿಸಲಾಗಿದ್ದು, ಇವರು ಅಲಪ್ಪುಳದ ಆರ್ಯಡ್ ನಿವಾಸಿಯಾಗಿದ್ದಾರೆ. ಪೂವಂ ಎಸಿ ಕೆನಾಲ್ ರಸ್ತೆ ಬಳಿಯ ಕಾಲೋನಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮನೆಯ ನೆಲವನ್ನು ಅಗೆದಾಗ ಶವ ಪತ್ತೆಯಾಗಿವೆ. ತಹಸೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆಲಪ್ಪುಳ ಮೂಲದ ಬಿಂದುಮೋನ್ ಸೆಪ್ಟೆಂಬರ್ 26 ರಂದು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿತ್ತು. ಅವರ ಸಂಬಂಧಿಕರು ಆಲಪ್ಪುಳ ಉತ್ತರ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದರು.
ಪೊಲೀಸರು ಆತನ ಮೊಬೈಲ್ ಫೋನ್ ಅನ್ನು ಚಂಗನಾಶ್ಶೇರಿ ಟವರ್ ಲೊಕೇಶನ್ನಲ್ಲಿ ಪತ್ತೆಹಚ್ಚಿದರು ಮತ್ತು ಬಿಂದುಮೋನ್ ಕೊನೆಯದಾಗಿ ಕರೆ ಮಾಡಿದ ವ್ಯಕ್ತಿ ಪೂವಂ ಮೂಲದ ಅವನ ಸ್ನೇಹಿತ ಮುತ್ತುಕುಮಾರ್ ಎಂಬುದನ್ನು ಪತ್ತೆಹಚ್ಚಿದರು. ಮುತ್ತುಕುಮಾರ್ ಅವರ ಮನೆಯನ್ನು ಪೊಲೀಸರು ಶೋಧಿಸಿದರೂ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ.
ಈ ಪ್ರದೇಶದಲ್ಲಿ ಮತ್ತೆ ತೀವ್ರ ತನಿಖೆ ನಡೆಸಿದಾಗ ಕಳೆದ ಕೆಲವು ದಿನಗಳಿಂದ ಈ ಮನೆಯಲ್ಲಿ ನಿರ್ಮಾಣ ಕಾಮಗಾರಿ ನಡೆದಿದ್ದು, ಮನೆಯ ಅಡಿಪಾಯವನ್ನು ಅಗೆದು ಕಾಂಕ್ರೀಟ್ ಹಾಕಿರುವುದು ಪತ್ತೆಯಾಗಿದೆ.
ಇತ್ತೀಚೆಗಷ್ಟೇ ಮನೆ ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸ್ ತಂಡಕ್ಕೆ ಲಭಿಸಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರ್ಡಿಒ ಸೂಚನೆಯಂತೆ ಚಂಗನಾಶ್ಶೇರಿ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ.
ನಂತರ ಶನಿವಾರ ಬೆಳಗ್ಗೆ ಚಂಗನಾಶ್ಶೇರಿ ಠಾಣಾಧಿಕಾರಿ ರಿಚರ್ಡ್ ವರ್ಗೀಸ್ ನೇತೃತ್ವದ ಪೊಲೀಸ್ ತಂಡ ಹೊಸದಾಗಿ ಕಾಂಕ್ರೀಟ್ ಮಾಡಿದ ಜಾಗವನ್ನು ಅಗೆದು ನೋಡಿದಾಗ ಗೋಣಿಚೀಲದಲ್ಲಿ ಕಟ್ಟಲಾಗಿದ್ದ ಶವ ಪತ್ತೆಯಾಗಿದೆ.
Advertisement