ರಾಜಸ್ತಾನ ವಿಧಾನಸಭೆಯಲ್ಲಿ ದೆವ್ವಗಳ ಕಾಟ? ಭಯ ಮರುಕಳಿಸುವಂತೆ ಮಾಡಿದ ಶಾಸಕರ ಸಾವು!!

ಹಿರಿಯ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಅವರ ಸಾವಿನ ಬೆನ್ನಲ್ಲೇ ಮತ್ತೆ ರಾಜಸ್ತಾನ ವಿಧಾನಸಭೆಯಲ್ಲಿನ ಶಂಕಿತ ದೆವ್ವಗಳ ಕಾಟದ ಭೀತಿ ಮತ್ತೆ ಮರುಕಳಿಸಿದೆ.
ರಾಜಸ್ಥಾನ ವಿಧಾನಸಭೆ ಕಟ್ಟಡ
ರಾಜಸ್ಥಾನ ವಿಧಾನಸಭೆ ಕಟ್ಟಡ

ಜೈಪುರ: ಹಿರಿಯ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಅವರ ಸಾವಿನ ಬೆನ್ನಲ್ಲೇ ಮತ್ತೆ ರಾಜಸ್ಥಾನ ವಿಧಾನಸಭೆಯಲ್ಲಿನ ಶಂಕಿತ ದೆವ್ವಗಳ ಕಾಟದ ಭೀತಿ ಮತ್ತೆ ಮರುಕಳಿಸಿದೆ.

ಹೌದು.. ಸುಮಾರು ಎರಡು ದಶಕಗಳ ಹಿಂದೆ ರಾಜಸ್ತಾನದ ಹೊಸ ವಿಧಾನಸಭೆ ಕಟ್ಟಡವನ್ನು ನಿರ್ಮಿಸಿ ಉದ್ಘಾಟನೆ ಮಾಡಲಾಗಿತ್ತು. ಆದರೆ ಅಂದು ಕಟ್ಟಡದ ಒಂದು ಭಾಗವನ್ನು ಸ್ಮಶಾನದ ಮೇಲೆ ನಿರ್ಮಿಸಲಾಗಿದೆ ಎಂಬ ಗುಸುಗುಸು ಪ್ರಾರಂಭವಾಗಿತ್ತು.  ಕಟ್ಟಡದ ಒಂದು ಭಾಗವನ್ನು ಹಳೆಯ ಸ್ಮಶಾನದಲ್ಲಿ ನಿರ್ಮಿಸಲಾಗಿದೆ. ಇದು ಆವರಣದ ಪಕ್ಕದಲ್ಲೇ ಇದೆ. ಹೀಗಾಗಿ ಇಲ್ಲಿ ದೆವ್ವಗಳ ಕಾಟ ಇರಬಹುದು ಎಂದು ಶಂಕಿಸಲಾಗಿತ್ತು. ಇದಕ್ಕೆ ಇಂಬು ನೀಡುವಂತೆ 2002 ರಲ್ಲಿ ಕಿಶನ್ ಮೋಟ್ವಾನಿ ಅವರ ಮರಣವಾಗಿತ್ತು. ಈ ಮರಣಕ್ಕೂ ಇದೇ ಸ್ಮಶಾನ ಕಾರಣ ಎಂದು ಆರೋಪಿಸಲಾಗಿತ್ತು. 

ಆದರೆ ಅಚ್ಚರಿ ಎಂದರೆ ಇಂದಿಗೂ ರಾಜಸ್ಥಾನದ ನೂತನ ವಿಧಾನಸಭೆ ಕಟ್ಟಡದಲ್ಲಿ ಇಂದಿನವರೆಗೂ ಪೂರ್ಣ ಸಾಮರ್ಥ್ಯದ ಅಂದರೆ 200 ಶಾಸಕರ ಪೂರ್ಣ ಸಾಮರ್ಥ್ಯದೊಂದಿಗೆ ಕಲಾಪ ನಡೆಸಲಾಗಿಲ್ಲ. ಪ್ರತೀ ಬಾರಿ ಕಲಾಪ ನಡೆದಾಗ ಕನಿಷ್ಠ ಪಕ್ಷ ಓರ್ವ ಶಾಸಕರು ಸಾವಿನ ಸುದ್ದಿ ವಿಧಾನಸಭೆಯಲ್ಲಿ ಇರುತ್ತದೆ. 2018 ರ ಕೊನೆಯ ಚುನಾವಣೆಯ ನಂತರದ ನಾಲ್ಕು ವರ್ಷಗಳಲ್ಲಿ, ವಿವಿಧ ಪಕ್ಷಗಳ ಆರು ಶಾಸಕರು ನಿಧನರಾಗಿದ್ದಾರೆ. ಭನ್ವರ್ ಲಾಲ್ ಮೇಘವಾಲ್, ಕೈಲಾಶ್ ತ್ರಿವೇದಿ, ಗಜೇಂದ್ರ ಸಿಂಗ್ ಶಕ್ತಾವತ್ ಮತ್ತು ಕಾಂಗ್ರೆಸ್‌ನ ಭನ್ವರ್ ಲಾಲ್ ಶರ್ಮಾ ಮತ್ತು ಬಿಜೆಪಿ ಶಾಸಕರಾದ ಕಿರಣ್ ಮಹೇಶ್ವರಿ ಮತ್ತು ಗೌತಮ್ ಲಾಲ್ ಮೀನಾ ಅವರೂ ಈ ಪಟ್ಟಿಯಲ್ಲಿದ್ದಾರೆ.

ಏಳು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಭನ್ವರ್‌ಲಾಲ್ ಶರ್ಮಾ ಭಾನುವಾರ ನಿಧನರಾದ ನಂತರ, ಈ ಮೂಢನಂಬಿಕೆಯ ಬಗ್ಗೆ ಮತ್ತೊಮ್ಮೆ ಮೌನವಾಗಿ ಚರ್ಚೆಯಾಗುತ್ತಿದೆ. ಈ ಹಿಂದಿನ ವಸುಂಧರಾ ರಾಜೇ ನೇತೃತ್ವದ ಸರ್ಕಾರದ ಅವಧಿಯಲ್ಲಿ, 2018 ರ ಏಪ್ರಿಲ್‌ನಲ್ಲಿ ಶಾಸಕ ಕಲ್ಯಾಣ್ ಸಿಂಗ್ ನಿಧನರಾಗಿದ್ದರು. ಆಗಲೂ ವಿಧಾನಸಭೆ ಆವರಣದಲ್ಲಿ ದೆವ್ವ ಮತ್ತು ದುಷ್ಟಶಕ್ತಿಗಳು ಅಡಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ವಿಧಾನಸಭೆ ಆವರಣದಲ್ಲಿ ‘ಹವನ ಯಾಗ’ ನಡೆಸುವಂತೆಯೂ ಬೇಡಿಕೆ ಇಡಲಾಗಿತ್ತು.

ಆಗಿನ ಮುಖ್ಯ ಸಚೇತಕ ಕೆಎಲ್ ಗುರ್ಜರ್ ಮತ್ತು ಬಿಜೆಪಿ ಶಾಸಕ ಹಬೀಬುರ್ ರೆಹಮಾನ್ ಕೂಡ ಇದೇ ರೀತಿಯ ಬೇಡಿಕೆಗಳನ್ನು ಮುಂದಿಡುತ್ತಿದ್ದರು. ಶರ್ಮಾ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರೂ, ಅವರ ಸಾವು ಈಗ ಆ ನಂಬಿಕೆಯೊಂದಿಗೆ ಸಂಬಂಧ ಹೊಂದಿದೆ. ವಿಧಾನಸಭೆ ಸಂಕೀರ್ಣವು ಲಾಲ್ ಕೋಠಿ ಮೋಕ್ಷಧಾಮದ ಪಕ್ಕದಲ್ಲಿದೆ ಮತ್ತು ಸ್ಮಶಾನದ ಕೆಲವು ಭಾಗವು ಅದರ ಆವರಣದೊಳಗೆ ಬರುತ್ತದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com