ನವದೆಹಲಿ: ಉಕ್ರೇನ್ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಮತ್ತು ಪರಮಾಣು ಶಸ್ತ್ರಾಸ್ತ್ರ ಆಯ್ಕೆಯನ್ನು ಯಾವುದೇ ಕಡೆಯಿಂದ ಯಾರೂ ಕೂಡ ಆಶ್ರಯಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ರಷ್ಯಾದ ಸಹವರ್ತಿ ಸೆರ್ಗೆಯ್ ಶೋಯಿಗು ಅವರಿಗೆ ಹೇಳಿದ್ದಾರೆ.
ದೂರವಾಣಿ ಮಾತುಕತೆಯಲ್ಲಿ, ಶೋಯಿಗು ಅವರು ಉಕ್ರೇನ್ನಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಕುರಿತು ಸಿಂಗ್ಗೆ ವಿವರಿಸಿದರು. ಉಕ್ರೇನ್ ಜೊತೆಗಿನ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆ ಹೊರತು ಪರಮಾಣು ಶಸ್ತ್ರಾಸ್ತ್ರಗಳನ್ನು ಯಾರೊಬ್ಬರೂ ಆಶ್ರಯಿಸಬಾರದು ಎಂದು ಹೇಳಿದ್ದಾರೆ.
ಅಂತೆಯೇ ಇದರಲ್ಲಿ ಡರ್ಟಿ ಬಾಂಬ್ ಬಳಕೆಯ ಮೂಲಕ ಸಂಭವನೀಯ ಪ್ರಚೋದನೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 'ಘರ್ಷಣೆಯ ಪರಿಹಾರಕ್ಕಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯತೆಯ ಬಗ್ಗೆ ಭಾರತದ ನಿಲುವನ್ನು ಸಿಂಗ್ ಪುನರುಚ್ಚರಿಸಿದರು. ಪರಮಾಣು ಅಥವಾ ರೇಡಿಯೊಲಾಜಿಕಲ್ ಶಸ್ತ್ರಾಸ್ತ್ರಗಳ ಬಳಕೆಯ ನಿರೀಕ್ಷೆಯು ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿರುವುದರಿಂದ ಯಾವುದೇ ದೇಶ ಪರಮಾಣು ಶಸ್ತ್ರಾಸ್ತ್ರಗಳನ್ನೂ ಆಶ್ರಯಿಸಬಾರದು ಎಂದು ಅವರು ಸೂಚಿಸಿದರು' ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಅಯೋಧ್ಯೆ ದೀಪೋತ್ಸವದಲ್ಲಿ ರಷ್ಯಾ ತಂಡದಿಂದ ಕಲಾ ಪ್ರದರ್ಶನ
ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಉಕ್ರೇನ್ನಲ್ಲಿ ಹದಗೆಟ್ಟ ಪರಿಸ್ಥಿತಿಯ ಬಗ್ಗೆಯೂ ಇಬ್ಬರು ಸಚಿವರು ಚರ್ಚಿಸಿದರು ಎಂದು ಅದು ಹೇಳಿದೆ. ಸುಮಾರು ಎರಡು ವಾರಗಳ ಹಿಂದೆ ಕ್ರಿಮಿಯಾದಲ್ಲಿ ಸಂಭವಿಸಿದ ಬೃಹತ್ ಸ್ಫೋಟಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾ, ಉಕ್ರೇನ್ನ ಹಲವು ನಗರಗಳನ್ನು ಗುರಿಯಾಗಿಟ್ಟುಕೊಂಡು ಪ್ರತೀಕಾರದ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.
ಉಕ್ರೇನ್- ರಷ್ಯಾ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ ಉಕ್ರೇನ್ ದೇಶವನ್ನು ತೊರೆಯುವಂತೆ ಅಲ್ಲಿರುವ ಭಾರತೀಯರಿಗೆ ಭಾರತದ ರಾಯಭಶಾರ ಕಚೇರಿ ಸೂಚಿಸಿತ್ತು.
Advertisement