ಸಚಿವ ಉಮೇಶ್ ಕತ್ತಿ ನಿಧನ: ಪ್ರಧಾನಿ ಮೋದಿ ದುಃಖ; ಕುಟುಂಬಸ್ಥರು, ಅಭಿಮಾನಿಗಳ ಕಣ್ಣೀರು

ಆಹಾರ, ನಾಗರಿಕ ಪೂರೈಕೆ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಯವರ ಹಠಾತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟ ಸದಸ್ಯರು
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟ ಸದಸ್ಯರು

ನವದೆಹಲಿ/ಬೆಳಗಾವಿ: ಆಹಾರ, ನಾಗರಿಕ ಪೂರೈಕೆ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಯವರ ಹಠಾತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

ಉಮೇಶ ಕತ್ತಿ ಅವರು ಕರ್ನಾಟಕದ ಅಭಿವೃದ್ಧಿಗೆ ಉತ್ಕೃಷ್ಟ ಕೊಡುಗೆಗಳನ್ನು ನೀಡಿದ ಅನುಭವಿ ನಾಯಕರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಈ ದುರಂತದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೋವು ಮತ್ತು ನಷ್ಟವನ್ನು ಕಳೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಧಾನಿ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 8 ಬಾರಿ ಶಾಸಕರಾಗಿ ಹಾಗೂ 4 ಬಾರಿ ಉಮೇಶ್ ಕತ್ತಿ ಸೇವೆ ಸಲ್ಲಿಸಿದ್ದಾರೆ. 

ಕುಟುಂಬಸ್ಥರು, ಅಭಿಮಾನಿಗಳ ಕಣ್ಣೀರು: ಉಮೇಶ್ ಕತ್ತಿ ಸಾವಿನ ಸುದ್ದಿ ಕೇಳಿ ಬೆಂಬಲಿಗರು, ಅಭಿಮಾನಿಗಳು ಮತ್ತು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದತ್ತ ಬೆಂಬಲಿಗರು ಆಗಮಿಸಿದ್ದಾರೆ. ಉಮೇಶ್ ಕತ್ತಿ ಅವರ ಅಗಲಿಕೆಯನ್ನು ನಂಬಲಾಗದೆ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ.

ಇನ್ನು ಕೆಲವೇ ಹೊತ್ತಿನಲ್ಲಿ ಬೆಳಗಾವಿಗೆ ಅವರ ಪಾರ್ಥಿವ ಶರೀರ ಬಂದು ತಲುಪಲಿದೆ. ಬೆಳಗ್ಗೆ 10.30ರ ವರೆಗೆ ಶಿವಬಸವನಗರದ ನಿವಾಸದ ಎದುರು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 10.30ಕ್ಕೆ ಬೆಳಗಾವಿಯಿಂದ ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಎದುರು ಅಂತಿಮ ದರ್ಶನ. ಬಳಿಕ 12ಗಂಟೆಗೆ ಸ್ವಗ್ರಾಮ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಮೃತದೇಹ ರವಾನೆಯಾಗಲಿದೆ. 12ರಿಂದ ಸಂಜೆ ಐದು ಗಂಟೆವರೆಗೂ ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಸಂಜೆ 5 ಗಂಟೆಗೆ ಉಮೇಶ್ ಕತ್ತಿಯವರ ಜಮೀನಿನಲ್ಲಿ ತಂದೆ ತಾಯಿಯ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com