ಚಂಡೀಗಢ: ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿ7 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹರಿಯಾಣದ ಮಹೇಂದರ್ಗಢ ಹಾಗೂ ಸೋನಿಪತ್ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಹೇಂದರ್ಗಢದಲ್ಲಿ 7 ಅಡಿಯ ಗಣೇಶ ವಿಸರ್ಜನೆ ಮಾಡುವಾಗ 9 ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ರಾಷ್ಟ್ರೀಯ ವಿಪತ್ತು ನಿಗ್ರಹ ದಳದ ನೆರವಿನೊಂದಿಗೆ ಜಿಲ್ಲಾಡಳಿತ ಕಾರ್ಯಾಚರಣೆ ಕೈಗೊಂಡು, 5 ಮಂದಿ ಯುವಕರನ್ನು ರಕ್ಷಿಸಿದೆ. ಉಳಿದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸೋನಿಪತ್ನ ಮಿಮಾರ್ಪುರ ಘಾಟ್ಗೆ ತಮ್ಮ ಮಗ ಮತ್ತು ಸೋದರಳಿಯನೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜನಾ ಮಾಡಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 31 ರಂದು ಆರಂಭವಾದ ಗಣೇಶ ಚತುರ್ಥಿ ಹಬ್ಬ 10 ದಿನಗಳ ಬಳಿಕ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅಂತ್ಯಗೊಂಡಿತು.
ದುರಂತದ ಕುರಿತಂತೆ ಟ್ವೀಟ್ ಮಾಡಿರೋ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್, ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ನಿಮಜ್ಜನದ ವೇಳೆ ಕಾಲುವೆಯಲ್ಲಿ ಮುಳುಗಿ ಹಲವರು ಅಕಾಲಿಕ ಮರಣ ಹೊಂದಿರೋದು ಅತೀವ ದುಃಖ ಉಂಟು ಮಾಡಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಮೃತರ ಕುಟುಂಬದವರ ಜೊತೆ ನಾವೆಲ್ಲರೂ ನಿಂತಿದ್ದೇವೆ. NDRF ತಂಡ ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಣೆ ಮಾಡಿದೆ. ರಕ್ಷಣೆಯಾದರೂ ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Advertisement