ಉತ್ತರ ಪ್ರದೇಶ: ಲಖಿಂಪುರ್ ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಅಪ್ರಾಪ್ತ ಸೋದರಿಯರ ಶವ ಪತ್ತೆ

ಹಿಂದುಳಿದ ದಲಿತ  ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ಸೋದರಿಯರ ಶವ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ನಿಘಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಬಾಲಕಿಯರು 15ರಿಂದ 17 ವರ್ಷ ವಯಸ್ಸಿನೊಳಗಿನವರಾಗಿದ್ದು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಲಕ್ನೊ: ಹಿಂದುಳಿದ ದಲಿತ  ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ಸೋದರಿಯರ ಶವ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ನಿಘಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಬಾಲಕಿಯರು 15ರಿಂದ 17 ವರ್ಷ ವಯಸ್ಸಿನೊಳಗಿನವರಾಗಿದ್ದು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮೂವರು ಬಾಲಕಿಯರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿ ಗ್ರಾಮದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಮರದಲ್ಲಿ ನೇಣುಬಿಗಿದು ಹೋಗಿದ್ದಾರೆ ಎಂದು ಸೋದರಿಯರ ಮನೆಯವರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.

ತೀವ್ರ ರೊಚ್ಚಿಗೆದ್ದಿರುವ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದ ಲಕ್ನೊ ವಲಯ ಇನ್ಸ್ ಪೆಕ್ಟರ್ ಜನರಲ್ (IG) ಲಕ್ಷ್ಮಿ ಸಿಂಗ್ ಹಾಗೂ ಲಖಿಂಪುರ್ ಖೇರಿ ಎಸ್ಪಿ ಸಂಜೀವ್ ಸುಮನ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕಬ್ಬಿನ ಗದ್ದೆಯ ನಡುವೆ ಶಾಲಿನಿಂದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ತಮೊಲಿಯಪುರ್ವ ಗ್ರಾಮದಲ್ಲಿ ಬಾಲಕಿಯರ ಶವ ಪತ್ತೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. 

ತಮ್ಮ ಮಕ್ಕಳು ಗುಡ್ಡದಲ್ಲಿ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ವೇಳೆ ಪಕ್ಕದ ಗ್ರಾಮದ ಮೂವರು ಯುವಕರು ಬೈಕ್ ನಲ್ಲಿ ಬಂದು ಬಾಲಕಿಯರನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಈ ವೇಳೆ ತಾನು ಗುಡಿಸಲಿನಲ್ಲಿ ಒಳಗೆ ಸ್ನಾನ ಮಾಡುತ್ತಿದ್ದೆ. ಒಬ್ಬಾತ ಹಳದಿ ಬಣ್ಣದ ಶರ್ಟ್, ಮತ್ತೊಬ್ಬ ಬಿಳಿ ಮತ್ತು ಮತ್ತೊಬ್ಬ ನೀಲಿ ಬಣ್ಣದ ಶರ್ಟ್ ಧರಿಸಿದ್ದನು ಎಂದು ಬಾಲಕಿಯರ ತಾಯಿ ಹೇಳುತ್ತಾರೆ.

ತಾಯಿ ಹೇಳುತ್ತಿರುವ ಮೂವರು ಪುರುಷರು ಕೂಡ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಬಾಲಕಿಯ ಸಾವಿನ ಕಾರಣವನ್ನು ತಿಳಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಆದರೆ, ಸದ್ಯಕ್ಕೆ, ಅವರ ದೇಹದಲ್ಲಿ ಯಾವುದೇ ದೈಹಿಕ ಗಾಯಗಳಿಲ್ಲದ ಕಾರಣ ನಾವು ಆತ್ಮಹತ್ಯೆಯ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಎಸ್ಪಿ ಸುಮನ್ ಹೇಳುತ್ತಾರೆ.

ಘಟನೆಯನ್ನು ದೃಢಪಡಿಸಿದ ಎಡಿಜಿ (ಎಲ್ & ಒ) ಪ್ರಶಾಂತ್ ಕುಮಾರ್, ಅವರ ಕುಟುಂಬದಿಂದ ಬಂದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದರು.

ಇದೇ ಲಖಿಂಪುರ್ ಖೇರಿಯಲ್ಲಿ ಕಳೆದ ಶನಿವಾರ ರಾತ್ರಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ಐವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಕಾಯ್ದೆ 2012 (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com