ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಮ್ಯಾಚ್ ಫಿಕ್ಸಿಂಗ್?: ಅವಿರೋಧ ಆಯ್ಕೆ ಮಾಡಲು ಪಿಸಿಸಿಗಳಿಗೆ ಸೂಚನೆ; ಪಾರದರ್ಶಕ ಚುನಾವಣೆಗಾಗಿ ಕಾಯುತ್ತಿದ್ದವರಿಗೆ ಶಾಕ್!

ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ರಾಹುಲ್ ಗಾಂಧಿ ನಿರಾಸಕ್ತಿ ಹೊಂದಿರುವ ಕಾರಣ ಚುನಾವಣೆ ಮೂಲಕ ಅಧ್ಯಕ್ಷರನ್ನು ಆರಿಸುವ ಸಿದ್ಧತೆ ನಡೆದಿದೆ. ಆದರೆ ಎಐಸಿಸಿ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಕೇಂದ್ರ ಕಾಂಗ್ರೆಸ್ ನಾಯಕತ್ವ ಸೂಚಿಸಿರುವುದು  ಪಾರದರ್ಶಕ ಸಾಂಸ್ಥಿಕ ಚುನಾವಣೆಗೆ ಬೇಡಿಕೆ ಇಟ್ಟಿರುವವರಿಗೆ ಆಘಾತವನ್ನುಂಟು ಮಾಡಿದೆ.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ರಾಹುಲ್ ಗಾಂಧಿ ನಿರಾಸಕ್ತಿ ಹೊಂದಿರುವ ಕಾರಣ ಚುನಾವಣೆ ಮೂಲಕ ಅಧ್ಯಕ್ಷರನ್ನು ಆರಿಸುವ ಸಿದ್ಧತೆ ನಡೆದಿದೆ. ಆದರೆ ಎಐಸಿಸಿ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಕೇಂದ್ರ ಕಾಂಗ್ರೆಸ್ ನಾಯಕತ್ವ ಸೂಚಿಸಿರುವುದು  ಪಾರದರ್ಶಕ ಸಾಂಸ್ಥಿಕ ಚುನಾವಣೆಗೆ ಬೇಡಿಕೆ ಇಟ್ಟಿರುವವರಿಗೆ ಆಘಾತವನ್ನುಂಟು ಮಾಡಿದೆ.

ಈ ಕ್ರಮವು ಅಧ್ಯಕ್ಷ ಹುದ್ದೆಯ ಚುನಾವಣೆಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ,  9,300 ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳನ್ನು ಆಯ್ಕೆ ಮಾಡಿರುವ ವಿಧಾನದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ.

ಈ ಪ್ರತಿನಿಧಿಗಳು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಪಿಸಿಸಿ ಪ್ರತಿನಿಧಿಗಳ ಚುನಾವಣೆಯ ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿದ್ದ ಪ್ರದೇಶ ಚುನಾವಣಾ ಅಧಿಕಾರಿಗಳು, ಕೇಂದ್ರ ನಾಯಕತ್ವದಿಂದ ಆಯ್ಕೆಯಾದ ಗಾಂಧಿ ಕುಟುಂಬದ ನಿಷ್ಠಾವಂತರ ಗುಂಪಾಗಿತ್ತು.

ಈ ಪಿಆರ್‌ಒಗಳು ಕೇಂದ್ರ ನಾಯಕತ್ವದೊಂದಿಗೆ ಸಮಾಲೋಚಿಸಿ ಪಿಸಿಸಿ ಪ್ರತಿನಿಧಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಹೊರತುಪಡಿಸಿ ಯಾವುದೇ ರಾಜ್ಯದಲ್ಲಿ ಪ್ರದೇಶ ಕಾಂಗ್ರೆಸ್ ಕಮಿಟಿ ಪ್ರತಿನಿಧಿಗಳ ಆಯ್ಕೆಗೆ ಯಾವುದೇ ಚುನಾವಣೆಗಳು ಇರಲಿಲ್ಲ.

ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಪಿಸಿಸಿ ಪ್ರತಿನಿಧಿಗಳು ಎಚ್ಚರಿಕೆಯಿಂದ ಆಯ್ಕೆಯಾದ ನಿಷ್ಠಾವಂತರಾಗಿದ್ದಾರೆ. ಹೊಸ ಸಿಡಬ್ಲ್ಯೂಸಿಯನ್ನು ಆಯ್ಕೆ ಮಾಡುವ  ಅಧಿಕಾರವನ್ನು ಎಐಸಿಸಿ ಸದಸ್ಯರು ರಾಜ್ಯ ಘಟಕಗಳಿಗೆ ನೀಡಿದ್ದಾರೆ.  ಪಿಸಿಸಿ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಬಹುದು. ಒಂದು ವೇಳೆ ಚುನಾವಣಾ ಬೇಡಿಕೆ ಕೇಳಿಬಂದರೆ ಪಿಆರ್‌ಒಗಳು ಚುನಾವಣೆ ನಡೆಸುತ್ತಾರೆ ಎಂದು ಪತ್ರಿಕೆ ವರದಿ ಮಾಡಿತ್ತು.

ಕಾಂಗ್ರೆಸ್ ನಾಯಕತ್ವವು ಈಗ ರಾಜ್ಯಾಧ್ಯಕ್ಷ ಮತ್ತು ಸಿಡಬ್ಲ್ಯೂಸಿ ಸದಸ್ಯರ ಸ್ಥಾನಗಳನ್ನು ವಶಪಡಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಹೋಗಿದೆ.  ಎಐಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಇನ್ನೂ ಯೋಜಿಸಿಲ್ಲ, ಈ ವಿಚಾರ ಪಿಸಿಸಿಗಳಿಗೆ ಬಿಟ್ಟದ್ದು. ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ಅವರ ಕುಟುಂಬದ ಯಾವೊಬ್ಬರೂ ಕಣಕ್ಕಿಳಿಯುವುದು ಅವರಿಗೆ ಇಷ್ಟವಿಲ್ಲ. ಹಾಗಾಗಿ ಇಂತಹ (ಪಿಸಿಸಿ) ಅಂಗೀಕಾರಗಳಲ್ಲಿ ಯಾವುದೇ ಅರ್ಥವಿಲ್ಲ. ಪ್ರದೇಶ ಕಾಂಗ್ರೆಸ್ ಘಟಕಗಳು ಏನು ಮಾಡುತ್ತವೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಯಾರಾದರೂ ನಾಮಪತ್ರ ಸಲ್ಲಿಸಿದರೆ ಸ್ಪರ್ಧೆ ಇರುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯು ಮುಕ್ತವಾಗಿದ್ದು, ಇದರಲ್ಲಿ ಗೋಪ್ಯವಾಗಿ ಇಡುವಂತಹದು ಏನೂ ಇಲ್ಲ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ಹೇಳಿದರು. ರಾಜ್ಯ ಘಟಕಗಳಿಗೆ ಅಧ್ಯಕ್ಷರ ನೇಮಕ ಮತ್ತು ಎಐಸಿಸಿಗೆ ಆಹ್ವಾನಿತರನ್ನು ನೇಮಿಸುವುದನ್ನು ಅಧ್ಯಕ್ಷರ ವಿವೇಚನೆಗೆ ಬಿಡುವ ಕುರಿತು ಪ್ರದೇಶ ಕಾಂಗ್ರೆಸ್‌ ಸಮಿತಿಗಳು ನಿರ್ಣಯ ಕೈಗೊಳ್ಳಲಿವೆ ಎಂದು ತಿಳಿಸಿದ್ದಾರೆ.

‘ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಅಥವಾ ರಾಜ್ಯಗಳಿಂದ ಎಐಸಿಸಿಗೆ 10 ಮಂದಿ ಆಹ್ವಾನಿತರನ್ನು ಆಯ್ಕೆ ಮಾಡಲು ಬಯಸುವವರು ಮತದಾರರ ಕುರಿತ ಮಾಹಿತಿಗೆ ಪ್ರಾಧಿಕಾರ ಪ್ರಕಟಿಸಿರುವ ಪಟ್ಟಿಯನ್ನು ಗಮನಿಸಬಹುದಾಗಿದೆ’ ಎಂದು ತಿಳಿಸಿದರು. 9000ಕ್ಕೂ ಅಧಿಕ ಮತದಾರರಿಗೆ ಕ್ಯೂಆರ್‌ ಕೋಡ್‌ ಒಳಗೊಂಡ ಗುರುತಿನ ಚೀಟಿಯನ್ನು ಈಗಾಗಲೇ ನೀಡಲಾಗಿದೆ. ಎಲ್ಲ ಮತದಾರರ ಪಟ್ಟಿಯನ್ನು ಎಐಸಿಸಿ ಮುಖ್ಯ ಕಚೇರಿಯಲ್ಲಿಯೂ ಸೆ.20ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಚುನಾವಣೆ ಸಿದ್ಧತೆ ಕುರಿತು ರಾಜ್ಯಗಳಲ್ಲಿನ ಪಕ್ಷದ ಚುನಾವಣಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಪರಿಸ್ಥಿತಿ ಅವಲೋಕಿಸಲಾಗಿದೆ’ ಎಂದರು. ಕಾಂಗ್ರೆಸ್‌ ಪಕ್ಷದ ಕಾರ್ಯಕಾರಿ ಸಮಿತಿಯ 23 ಸದಸ್ಯರ ಪೈಕಿ 12 ಜನರು ಚುನಾಯಿತರಾದರೆ, 11 ಮಂದಿ ನಾಮನಿರ್ದೇಶನಗೊಳ್ಳುತ್ತಾರೆ. 12ಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿದ್ದರೆ ಚುನಾವಣೆ ನಡೆಯಬೇಕಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತಂತೆ ಸೆಪ್ಟೆಂಬರ್‌ 22ರಂದು ಅಧಿಸೂಚನೆ ಹೊರಬೀಳಲಿದೆ. ಆ ವೇಳೆಗೆ ಎಲ್ಲ ಪ್ರದೇಶ ಕಾಂಗ್ರೆಸ್‌ ಘಟಕಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಳ್ಳಲಿದೆ. ಅಗತ್ಯಬಿದ್ದರೆ ಅಕ್ಟೋಬರ್‌ 17ರಂದು ಚುನಾವಣೆ ನಡೆಯಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com