ಇದೊಂದು ಐತಿಹಾಸಿಕ ದಿನ, 'ಪ್ರಾಜೆಕ್ಟ್ ಚೀತಾ' ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ನಮ್ಮ ಪ್ರಯತ್ನವಾಗಿದೆ: ಪ್ರಧಾನಿ ಮೋದಿ

ಏಳು ದಶಕಗಳ ನಂತರ ಇಂದು ಸೆಪ್ಟೆಂಬರ್ 17ರಂದು ಚೀತಾಗಳು ಭಾರತದ ನೆಲಕ್ಕೆ ಮರಳಿವೆ. ಈ ಐತಿಹಾಸಿಕ ದಿನದಂದು ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ. ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಅವರ ಸಹಾಯವಿಲ್ಲದೆ ಇಂದು ಚೀತಾ ಭಾರತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಕುನೋ ರಾಷ್ಟ್ರೀಯ ಉದ್ಯಾನವನ(ಮಧ್ಯ ಪ್ರದೇಶ): ಏಳು ದಶಕಗಳ ನಂತರ ಇಂದು ಸೆಪ್ಟೆಂಬರ್ 17ರಂದು ಚೀತಾಗಳು ಭಾರತದ ನೆಲಕ್ಕೆ ಮರಳಿವೆ. ಈ ಐತಿಹಾಸಿಕ ದಿನದಂದು ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ. ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಅವರ ಸಹಾಯವಿಲ್ಲದೆ ಇಂದು ಚೀತಾ ಭಾರತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಪೆಟ್ಟಿಗೆಯಿಂದ ಹೊರಗೆ ಬಿಟ್ಟು ದೇಶವನ್ನುದ್ದೇಶಿಸಿ ಮಾತನಾಡಿದರು.

ದಶಕಗಳ ಹಿಂದೆ, ಜೀವವೈವಿಧ್ಯದ ಹಳೆಯ ಕೊಂಡಿಯಾದ ಚೀತಾ ಇಲ್ಲಿ ಅಳಿದುಹೋಗಿತ್ತು. ಇಂದು ಅದನ್ನು ಮರುಸಂಪರ್ಕಿಸಲು ನಮಗೆ ಅವಕಾಶ ಸಿಕ್ಕಿದೆ. ಈ ಚೀತಾಗಳೊಂದಿಗೆ, ಭಾರತದ ಪ್ರಕೃತಿ-ಪ್ರೀತಿಯ ಪ್ರಜ್ಞೆಯು ಪೂರ್ಣ ಬಲದಿಂದ ಜಾಗೃತಗೊಂಡಿದೆ ಎಂದರು.

1952 ರಲ್ಲಿ ನಾವು ದೇಶದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಿದ್ದು ದುರದೃಷ್ಟಕರವಾಗಿತ್ತು. ದಶಕಗಳಿಂದ ಅವುಗಳ ಸಂತತಿ ಭಾರತದಲ್ಲಿ ಬೆಳೆಯುವಂತೆ ಮಾಡಲು ಯಾವುದೇ ಅರ್ಥಪೂರ್ಣ ಪ್ರಯತ್ನಗಳು ನಡೆದಿಲ್ಲ. ಇಂದು, ನಾವು ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಆಚರಿಸುತ್ತಿರುವಾಗ, ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳನ್ನು ಪುನರ್ವಸತಿ ಮಾಡಲು ನೋಡುತ್ತಿದ್ದೇವೆ ಎಂದರು.

ಅಂತರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತವು ಈ ಚೀತಾಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಪ್ರಯತ್ನ ವಿಫಲವಾಗಲು ಬಿಡಬಾರದು ಎಂದರು. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚೀತಾಗಳನ್ನು ನೋಡಲು ಜನರು ತಾಳ್ಮೆಯನ್ನು ತೋರಿಸಬೇಕು. ಕೆಲವು ತಿಂಗಳು ಕಾಯಬೇಕು. ಚೀತಾಗಳು ಈ ಪ್ರದೇಶದ ಬಗ್ಗೆ ಅರಿವಿಲ್ಲದೆ ಅತಿಥಿಗಳಾಗಿ ಬಂದಿವೆ. ಕುನೊ ರಾಷ್ಟ್ರೀಯ ಉದ್ಯಾನವನವನ್ನು ತಮ್ಮ ಮನೆಯಾಗಿ ಮಾಡಲು, ನಾವು ಕೆಲವು ತಿಂಗಳು ಸಮಯ ನೀಡಬೇಕಾದ ಅಗತ್ಯವಿದೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿದರು. 

ಪ್ರಕೃತಿ ಮತ್ತು ಪರಿಸರ, ಪ್ರಾಣಿಗಳು ಮತ್ತು ಪಕ್ಷಿಗಳು, ಭಾರತಕ್ಕೆ ಕೇವಲ ಸುಸ್ಥಿರತೆ ಮತ್ತು ಭದ್ರತೆ ಮಾತ್ರವಲ್ಲ. ನಮಗೆ, ಇದು ನಮ್ಮ ಸಂವೇದನೆ ಮತ್ತು ಆಧ್ಯಾತ್ಮಿಕತೆಯ ಆಧಾರವಾಗಿದೆ. 21 ನೇ ಶತಮಾನದ ಭಾರತವು ಆರ್ಥಿಕತೆ ಮತ್ತು ಪರಿಸರ ವಿಜ್ಞಾನವು ಸಂಘರ್ಷದ ಕ್ಷೇತ್ರಗಳಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com