ಲೋಕಸಭೆ, ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

ಇತ್ತೀಚೆಗೆ ನಿಧನರಾದ ಪುಣೆ ಸಂಸದ ಗಿರೀಶ್ ಬಾಪಟ್ ಮತ್ತು ಕೇರಳದ ಮಾಜಿ ಸಂಸದ ಇನ್ನೋಸೆಂಟ್ ವರೀದ್ ಅವರಿಗೆ ಸಂತಾಪ ಸೂಚಕವಾಗಿ ಲೋಕಸಭೆಯ ಕಲಾಪವನ್ನೂ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಸಂಸತ್ತು
ಸಂಸತ್ತು
Updated on

ನವದೆಹಲಿ: ಇತ್ತೀಚೆಗೆ ನಿಧನರಾದ ಪುಣೆ ಸಂಸದ ಗಿರೀಶ್ ಬಾಪಟ್ ಮತ್ತು ಕೇರಳದ ಮಾಜಿ ಸಂಸದ ಇನ್ನೋಸೆಂಟ್ ವರೀದ್ ಅವರಿಗೆ ಸಂತಾಪ ಸೂಚಕವಾಗಿ ಲೋಕಸಭೆಯ ಕಲಾಪವನ್ನೂ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಪುಣೆಯ ಹಾಲಿ ಬಿಜೆಪಿ ಸಂಸದರಾಗಿದ್ದ ಬಾಪಟ್ ಅವರು ಮಾರ್ಚ್ 29 ರಂದು ನಿಧನರಾದರು ಮತ್ತು ತ್ರಿಶೂರ್‌ನ ಚಾಲಕುಡಿ ಕ್ಷೇತ್ರದ ಮಾಜಿ ಸಂಸದ ಇನೋಸೆಂಟ್ ಮಾರ್ಚ್ 26 ರಂದು ನಿಧನರಾದರು.

ನಿಧನರಾದವರಿಗೆ ಗೌರವ ಸೂಚಕವಾಗಿ ಈಗ ಲೋಕಸಭೆ ಕೆಲವು ಗಂಟೆಗಳ ಕಾಲ ಮುಂದೂಡಲ್ಪಟ್ಟಿದೆ. ಈ ಹಿಂದೆ ನಿಧನರಾದ ಹಾಲಿ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಗುತ್ತಿತ್ತು.

ರಾಜ್ಯಸಭೆ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಗದ್ದಲ ಸೃಷ್ಟಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಬಂದಿದ್ದರೆ, ಟಿಎಂಸಿ ಸದಸ್ಯರು ಕಪ್ಪು ಮುಖವಾಡಗಳನ್ನು ಧರಿಸಿದ್ದರು. ಅವರು ಮತ್ತು ಇತರ ವಿರೋಧ ಪಕ್ಷದ ಸಂಸದರು ಕಲಾಪ ಆರಂಭವಾಗುತ್ತಿದ್ದಂತೆ ಆರಂಭದಲ್ಲಿ ಪಟ್ಟಿ ಮಾಡಲಾದ ಅಧಿಕೃತ ಪೇಪರ್‌ಗಳನ್ನು ಸದನದ ಮೇಜಿನ ಮೇಲೆ ಇಡುವಂತೆ ಸಭಾಪತಿ ಜಗದೀಪ್ ಧನಕರ್ ಕರೆ ನೀಡುತ್ತಿದ್ದಂತೆ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಕೂಡಲೇ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ, ಪ್ರತಿಭಟನೆಯ ಸಂಕೇತವಾಗಿ ವಿರೋಧ ಪಕ್ಷದ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮೋದಿ-ಅದಾನಿ ಭಾಯ್-ಭಾಯ್ ಎಂದು ಘೋಷಣೆ ಕೂಗಿದರು.

ಅದಾನಿ ಗ್ರೂಪ್ ವಿರುದ್ಧ ಕಾರ್ಪೊರೇಟ್ ವಂಚನೆ ಮತ್ತು ಸ್ಟಾಕ್ ಬೆಲೆಯ ದುರ್ಬಳಕೆ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಸಂಸದರು ಘೋಷಣೆಗಳನ್ನು ಕೂಗಿದರು. ಅದಾನಿ ಗ್ರೂಪ್ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com