ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಕೆಲವು ವಶಪಡಿಸಿಕೊಂಡ ವಸ್ತುಗಳು ಮತ್ತು ಪ್ರಕರಣದ ಆಸ್ತಿ ಪತ್ರಗಳು ಕಳುವಾಗಿದ್ದರಿಂದ ಎಎಸ್ಐ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ನಿನ್ನೆ ರಾತ್ರಿ ರಾಜೌರಿಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ 'ಮಲ್ಖಾನಾ'ದ ಬೀಗ ಮುರಿದ ಕಳ್ಳರು ಕೆಲವು ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಫೋರೆನ್ಸಿಕ್ ತಂಡದ ಸಹಾಯದಿಂದ ಅಪರಾಧದ ದೃಶ್ಯಗಳ ಪರಿಶೀಲನೆ ಮತ್ತು ತಾಂತ್ರಿಕ ಪುರಾವೆಗಳನ್ನು ಸಹ ವಿಶ್ಲೇಷಿಸುತ್ತಿದ್ದಾರೆ. ಕೆಲವು ಶಂಕಿತರನ್ನು ವಿಚಾರಣೆ ನಡೆಸಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ರಾಜೌರಿ ಹಿರಿಯ ಪೊಲೀಸ್ ಅಧೀಕ್ಷಕ ಅಮೃತಪಾಲ್ ಸಿಂಗ್ ಅವರು ಎಎಸ್ಐ ತಾರಿಕ್ ಮೆಹಮೂದ್, ಎಸ್ಜಿಸಿಟಿ ಮೊಹಮ್ಮದ್ ಶಫೀಕ್ ಮತ್ತು ವಿಶೇಷ ಪೊಲೀಸ್ ಅಧಿಕಾರಿಗಳಾದ ಗುಲಾಂ ನಬಿ, ಮೊಹಮ್ಮದ್ ಮುನ್ಷಿ ಮತ್ತು ಮುರ್ತಾಜಾ ಖಾನ್ ಅವರನ್ನು ಕರ್ತವ್ಯಲೋಪದ ಹಿನ್ನಲೆ ಅಮಾನತುಗೊಳಿಸಿದ್ದಾರೆ.
ವಿಚಾರಣೆಯನ್ನು ಪ್ರಾರಂಭಿಸಲಾಗಿದ್ದು ಶೀಘ್ರದಲ್ಲೇ ಪ್ರಗತಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು. ರಾಜೌರಿ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಚಾರಣೆ ನಡೆಸಲಿದ್ದಾರೆ.
Advertisement