ಅಸ್ಸಾಂ: ಅದಾನಿ ಕುರಿತು ಟ್ವೀಟ್ ಮಾಡುವ ಭರದಲ್ಲಿ ತಮ್ಮನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ನಾಯಕನ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಏ.14 ರಂದು ಪ್ರಧಾನಿ ಮೋದಿ ಅವರು ಗುವಾಹಟಿಗೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ ಮಾಡಿರುವುದು ಮಾನಹಾನಿಕರವಾಗಿದೆ. ಪ್ರಧಾನಿ ಮೋದಿ ಭೇಟಿ ಬಳಿಕ ನಾವು ರಾಹುಲ್ ಗಾಂಧಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡುವುದಾಗಿ ಶರ್ಮಾ ತಿಳಿಸಿದ್ದಾರೆ.
ಅದಾನಿ ವಿಷಯವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ, ಈ ವಿಚಾರವನ್ನು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ನಾಯಕರ ವಿರುದ್ಧ ವಾಗ್ದಾಳಿ ನಡೆಸುವುದಕ್ಕೂ ಬಳಸಿಕೊಂಡಿದ್ದರು.
ಅವರು ನಿಜವನ್ನು ಮರೆಮಾಚುತ್ತಾರೆ, ಆದ್ದರಿಂದ ಪ್ರತಿ ದಿನವೂ ಅವರು ದಾರಿತಪ್ಪಿಸುತ್ತಾರೆ. ಪ್ರಶ್ನೆಯೇನೆಂದರೆ ಅದಾನಿ ಕಂಪನಿಗಳಲ್ಲಿ ಇರುವ 20,000 ಕೋಟಿ ರೂಪಾಯಿ ಬೇನಾಮಿ ಹಣ ಯಾರದ್ದು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದರಲ್ಲಿ ಅದಾನಿ ಅವರ ಹೆಸರನ್ನು ಬೇರೆ ನಾಯಕರ ಹೆಸರುಗಳೊಂದಿಗೆ ರೀತಿಯ ಸಂಕ್ಷಿಪ್ತ ರೂಪದಲ್ಲಿ ಬಳಕೆ ಮಾಡಿದ್ದರು.
Advertisement