
ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು 'ಸ್ನೇಹಿತ' ಎಂದು ಕರೆದಿದ್ದಾರೆ. ರಾಜ್ಯದಲ್ಲಿ 'ರಾಜಕೀಯ ಜಗಳ' ನಡೆಯುತ್ತಿರುವಾಗಲೂ ಇಲ್ಲಿ ನಡೆದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ, ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರಣಕ್ಕಾಗಿ ಗೆಹ್ಲೋಟ್ ಅವರಿಗೆ ಧನ್ಯವಾದ ಅರ್ಪಿಸಿದರು.
'ಗೆಹ್ಲೋಟ್ ಜಿ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ರಾಜಕೀಯ ಜಗಳದ ಹೋರಾಟದ ದಿನಗಳಲ್ಲಿ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗಲೂ, ಅವರು ಅಭಿವೃದ್ಧಿ ಕಾರ್ಯಗಳಿಗಾಗಿ ಸಮಯವನ್ನು ವಿನಿಯೋಗಿಸಿದರು ಮತ್ತು ರೈಲ್ವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಾನು ಅವರನ್ನು ಸ್ವಾಗತಿಸುತ್ತೇನೆ' ಎಂದು ಮೋದಿ ಹೇಳಿದರು.
ಮಂಗಳವಾರ, ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಜೈಪುರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಿದಾಗಿನ ಭ್ರಷ್ಟಾಚಾರದ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪವಾಸವಿದ್ದರು.
ಇದಕ್ಕೂ ಮೊದಲು ಸಮಾರಂಭದಲ್ಲಿ ಭಾಷಣ ಮಾಡಿದ ಗೆಹ್ಲೋಟ್, ರಾಜಸ್ಥಾನದಲ್ಲಿ ರೈಲ್ವೆಗೆ ಸಂಬಂಧಿಸಿದ ಬೇಡಿಕೆಗಳನ್ನು ಪ್ರಸ್ತಾಪಿಸಿದರು ಮತ್ತು ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಕೇಂದ್ರದ ರೈಲ್ವೆ ಸಚಿವರಾಗಿದ್ದವರು ತಮ್ಮ ರಾಜ್ಯದವರು ಎಂದು ಪ್ರಸ್ತಾಪಿಸಿದರು.
'ಸ್ವಾತಂತ್ರ್ಯ ಬಂದ ತಕ್ಷಣ ಆಗಬೇಕಾದ ಕೆಲಸ ಇಲ್ಲಿಯವರೆಗೂ ಆಗಿಲ್ಲ. ಆದರೆ, ನನ್ನ ಮೇಲೆ ಎಷ್ಟು ನಂಬಿಕೆ ಇಟ್ಟು ಇಂದು ಆ ಕೆಲಸವನ್ನು ಕೊಟ್ಟಿದ್ದೀರಿ. ಗೆಹ್ಲೋಟ್ ಅವರ ನಂಬಿಕೆಯೇ ನಮ್ಮ ಸ್ನೇಹಕ್ಕೆ ಬಲ ನೀಡುತ್ತದೆ. ಈ ಸ್ನೇಹದ ಮೇಲೆ ನೀವು ಇಟ್ಟಿರುವ ನಂಬಿಕೆಗೆ ನಾನು ಧನ್ಯವಾದ ಹೇಳುತ್ತೇನೆ' ಎಂದು ಮೋದಿ ತಿಳಿಸಿದರು.
ರೈಲ್ವೆ ಸಚಿವರು ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರು ರಾಜಸ್ಥಾನದಿಂದ ಬಂದವರು ಎಂದು ಉಲ್ಲೇಖಿಸಿದ ಪ್ರಧಾನಿ, 'ನಿಮ್ಮ ಎರಡೂ ಕೈಗಳಲ್ಲಿ ಲಡ್ಡೂಗಳಿವೆ ಎಂದು ನಾನು ಗೆಹ್ಲೋಟ್ ಜಿಗೆ ಹೇಳಲು ಬಯಸುತ್ತೇನೆ. ರೈಲ್ವೆ ಸಚಿವರು ರಾಜಸ್ಥಾನದವರು ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರು ಸಹ ರಾಜಸ್ಥಾನದವರು ಎಂದರು.
ಕಳೆದ ಐದು ತಿಂಗಳಲ್ಲಿ ಎರಡನೇ ಬಾರಿಗೆ ಗೆಹ್ಲೋಟ್ ಅವರನ್ನು ಮೋದಿ ಹೊಗಳಿದ್ದಾರೆ. ಕಳೆದ ನವೆಂಬರ್ನಲ್ಲಿ ಬನ್ಸ್ವಾರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ವೇದಿಕೆ ಹಂಚಿಕೊಂಡಾಗ, ಮೋದಿ ಅವರು ಗೆಹ್ಲೋಟ್ ಅನ್ನು ಮುಖ್ಯಮಂತ್ರಿಗಳ ಪೈಕಿ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂದು ಬಣ್ಣಿಸಿದ್ದರು. ಈ ಬಗ್ಗೆ ಪೈಲಟ್ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
Advertisement