ನವದೆಹಲಿ: ಪ್ರಿಯಕರನಿಂದ ಹತ್ಯೆಯಾದ ತನ್ನ ಮಗಳು ಶ್ರದ್ಧಾ ವಾಕರ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಆಕೆಯ ಕಳೇಬರದ ಉಳಿದ ಭಾಗಗಳನ್ನು ನೀಡುವಂತೆ ಕೋರಿ ಆಕೆಯ ತಂದೆ ಶನಿವಾರ ನಗರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸಂಪ್ರದಾಯ ಮತ್ತು ಸಂಸ್ಕೃತಿಗೆ ಆಕೆಯ ಅಂತಿಮ ವಿಧಿಗಳನ್ನು ನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಶ್ರದ್ಧಾ ತಂದೆ ವಿಕಾಸ್ ಮದನ್ ವಾಕರ್ ಪರವಾಗಿ ವಕೀಲೆ ಸೀಮಾ ಕುಶ್ವಾಹ ಅವರು ಇಂದು ಕೋರ್ಟ್ ಅರ್ಜಿ ಸಲ್ಲಿಸಿದ್ದು, ಸಂಪ್ರದಾಯದ ಪ್ರಕಾರ ಮೃತಪಟ್ಟ ಒಂದು ವರ್ಷದೊಳಗೆ ಅಂತ್ಯಕ್ರಿಯೆ ಮಾಡಬೇಕು. ಹಿಂದೂ ಕ್ಯಾಲೆಂಡರ್ ಪ್ರಕಾರ ಮೇ 8ರ ಒಳಗಾಗಿ ಅಂತಿ ವಿಧಿವಿಧಾನ ನೆರವೇರಿಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ: ಶ್ರದ್ಧಾ ಕೊಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ದೆಹಲಿ ಪೊಲೀಸರು, ಹಲವರ ಜತೆ ಡೇಟಿಂಗ್ ನಡೆಸಿದ್ದ ಆರೋಪಿ
ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಏಪ್ರಿಲ್ 29 ರಂದು ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವುದಾಗಿ ದೆಹಲಿ ಪೊಲೀಸರು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನಿಶಾ ಖುರಾನಾ ಕಕ್ಕರ್ ಅವರಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಮೇ 18 ರಂದು ಶ್ರದ್ಧಾ ವಾಕರ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಆಫ್ತಾಬ್ ಪೂನಾವಾಲಾ ಆಕೆಯನ್ನು ಹತ್ಯೆ ಮಾಡಿ, ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ಫ್ರಿಜ್ನಲ್ಲಿ ಇರಿಸಿದ್ದನು. ನಂತರ ಶ್ರದ್ಧಾ ದೇಹದ ಭಾಗಗಳನ್ನು ರಾಷ್ಟ್ರ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಎಸೆದಿದ್ದನು.
Advertisement