ಲೋಕಸಭೆ
ಲೋಕಸಭೆ

ಮಣಿಪುರ ವಿಚಾರವಾಗಿ ಮುಂದುವರಿದ ವಿಪಕ್ಷಗಳ ಪ್ರತಿಭಟನೆ; ಲೋಕಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆ ಮುಂದುವರಿದಿದ್ದು, ಲೋಕಸಭೆ ಕಲಾಪಕ್ಕೆ ಗುರುವಾರವೂ ಅಡ್ಡಿಯುಂಟಾಯಿತು. ಪ್ರತಿಭಟನೆ ನಡುವೆಯೇ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
Published on

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆ ಮುಂದುವರಿದಿದ್ದು, ಲೋಕಸಭೆ ಕಲಾಪಕ್ಕೆ ಗುರುವಾರವೂ ಅಡ್ಡಿಯುಂಟಾಯಿತು. ಪ್ರತಿಭಟನೆ ನಡುವೆಯೇ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಕಲಾಪಕ್ಕೆ ಉಂಟಾಗುತ್ತಿರುವ ಪುನರಾವರ್ತಿತ ಅಡ್ಡಿಗಳಿಂದ ಅಸಮಾಧಾನಗೊಂಡ ಸ್ಪೀಕರ್ ಓಂ ಬಿರ್ಲಾ ಅವರು ಸತತ ಎರಡನೇ ಬಾರಿಗೆ ಗುರುವಾರ ಪ್ರಶ್ನೋತ್ತರ ಅವಧಿಯ ವೇಳೆ ಸದನದಲ್ಲಿ ಕಲಾಪದ ಅಧ್ಯಕ್ಷತೆ ವಹಿಸಲಿಲ್ಲ.

ಮಣಿಪುರ ವಿಷಯವಾಗಿ ವಿರೋಧ ಪಕ್ಷದ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗುತ್ತಾ ಫಲಕಗಳನ್ನು ಪ್ರದರ್ಶಿಸಿದರು.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ಸ್ಪೀಕರ್ ಸದನಕ್ಕೆ ಬರಬೇಕೆಂದು ನಾವು ಬಯಸುತ್ತೇವೆ. ಅವರು 'ನಮ್ಮ ಉಸ್ತುವಾರಿ' ಎಂದು ಹೇಳಿದರು.

ಈವೇಳೆ ಕಲಾಪದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರವಾಲ್, ಚೌಧರಿ ಅವರ ಸಂದೇಶವನ್ನು ಸರಿಯಾದ ರೀತಿಯಲ್ಲಿ ಸ್ಪೀಕರ್‌ಗೆ ತಲುಪಿಸಲಾಗುವುದು ಎಂದು ಹೇಳಿದರು.

ಸ್ಪೀಕರ್ ಓಂ ಬಿರ್ಲಾ ಅವರು, ಸದನದಲ್ಲಿ ಸುಗಮ ಕಲಾಪಕ್ಕೆ ಪದೇ ಪದೆ ಅಡ್ಡಿ ಉಂಟಾಗುತ್ತಿರುವುದರಿಂದ ಅಸಮಾಧಾನಗೊಂಡಿದ್ದಾರೆ ಮತ್ತು ಕಲಾಪದಿಂದ ದೂರ ಉಳಿದಿದ್ದಾರೆ.

ಅಗರವಾಲ್ ಪ್ರತಿಭಟನಾನಿರತ ಸದಸ್ಯರನ್ನು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ವಿನಂತಿಸಿದರು ಮತ್ತು ಪ್ರಶ್ನೋತ್ತರ ಅವಧಿಯನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ, ಗದ್ದಲ ಮುಂದುವರಿದಿದ್ದರಿಂದ ಕಲಾಪ ಆರಂಭಗೊಂಡ 20 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಜುಲೈ 20 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಮಣಿಪುರ ಹಿಂಸಾಚಾರದ ಕುರಿತು ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಗಳು ಸಂಸತ್ತಿನ ಕಲಾಪಕ್ಕೆ ಅಡ್ಡಿಯಾಗುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com