'ಮಲ್ಲಿಕಾರ್ಜುನ ಖರ್ಗೆ ಕುರಿತ ಆರಗ ಜ್ಞಾನೇಂದ್ರ ಟೀಕೆಯಿಂದ ಆಘಾತಕ್ಕೊಳಗಾಗಿದ್ದೇನೆ': ಕಾಂಗ್ರೆಸ್ ನಾಯಕ ಶಶಿ ತರೂರ್

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತಂತೆ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಮಾಡಿರುವ ಟೀಕೆಗಳಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತಂತೆ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಮಾಡಿರುವ ಟೀಕೆಗಳಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕರ್ನಾಟಕದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಟೀಕೆಗಳನ್ನು ನೋಡಿ ನನಗೆ ಭಯವಾಯಿತು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ಹೇಳಿದ್ದು, ಈ ಕುರಿತು ಟ್ವಿಟರ್ ನಲ್ಲಿ ವಿಡಿಯೋದಲ್ಲಿ ಶಶಿ ತರೂರ್ ಆಘಾತ ವ್ಯಕ್ತಪಡಿಸಿದ್ದಾರೆ.

'ಈ ರೀತಿಯ ಭಾಷೆ ಹೇಯ ಮತ್ತು ನಮ್ಮ ರಾಜಕೀಯದಲ್ಲಿ ಸ್ಥಾನವಿಲ್ಲ. ನಮ್ಮ ಪಕ್ಷದ ಯಾರಿಗಾದರೂ ಸಮಸ್ಯೆ ಇದ್ದರೆ ಅವರು ಹೇಳಿದ್ದನ್ನು ಟೀಕಿಸಿ, ಅವರು ಮಾಡಿದ್ದನ್ನು ಟೀಕಿಸಿ, ಅವರ ನಿಲುವಿನ ಬಗ್ಗೆ ಟೀಕಿಸಿ", ಆದರೆ "ಅವರ ಮೈ ಬಣ್ಣ, ಅವರ ಮೂಲವನ್ನು ಟೀಕಿಸುವುಗದು ಹೇಯ ಕೃತ್ಯ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ಇದು ಕರ್ನಾಟಕದಲ್ಲಿ ನಮ್ಮ ವಿರೋಧ ಪಕ್ಷದ ಕೈಯಲ್ಲಿ ರಾಜಕೀಯವು ಯಾವ ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ತೋರಿಸುತ್ತದೆ ... ”ಎಂದು ತರೂರ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಆಗಸ್ಟ್ 1 ರಂದು ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಹಿರಿಯ ಶಾಸಕ ಆರಗ ಜ್ಞಾನೇಂದ್ರ, ಖರ್ಗೆ ಅವರ ಮೈಬಣ್ಣ ಮತ್ತು ಉತ್ತರ ಕರ್ನಾಟಕ ಜನರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಕರಣವನ್ನು ಶುಕ್ರವಾರ ಘಟನೆ ಸಂಭವಿಸಿದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ವರ್ಗಾಯಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಅವರ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಸ್ಪಷ್ಟನೆ ನೀಡಿದ್ದ ಆರಗ ಜ್ಞಾನೇಂದ್ರ ಅವರು,  ನಾನು ಆಡಿದ ಮಾತು ಮತ್ತು ಆಡದ ಮಾತನ್ನು ಸೇರಿಸಿ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಐದು ಬಾರಿ ಶಾಸಕನಾದವನು ನಾನು. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅಪಾರವಾದ ಗೌರವ ನನಗಿದೆ ಎಂದು ಹೇಳಿದ್ದರು.

ಅಂತೆಯೇ ಅವರ ಬಗ್ಗೆ ಕೀಳಾಗಿ ಟೀಕೆ ಮಾಡಿಲ್ಲ, ಖಂಡ್ರೆ ಎನ್ನುವ ಬದಲು ಬಾಯಿ ತಪ್ಪಿ ಖರ್ಗೆ ಹೆಸರು ಹೇಳಿದೆ. ನಂತರ ಕ್ಷಮೆಯಾಚಿಸಿದ್ದೇನೆ. ಕಾಂಗ್ರೆಸ್ ನವರು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಎಳೆತಂದು ಖರ್ಗೆಯವರನ್ನು ಸಣ್ಣವರನ್ನಾಗಿ ಮಾಡಿದ್ದಾರೆ. ನಾನು ಈಗಾಗಲೇ ವಿಷಯವನ್ನು ಸ್ಪಷ್ಟಪಡಿಸಿದ್ದೇನೆ. ವಿಶೇಷವಾಗಿ ಖರ್ಗೆ ಬಗ್ಗೆ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ ಎಂದು ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com