ಗದ್ದಲದ ನಡುವೆ ರಾಜ್ಯಸಭೆ-ಲೋಕಸಭೆ ಮಧ್ಯಾಹ್ನ 2ಕ್ಕೆ ಮುಂದೂಡಿಕೆ; ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅಮಾನತು ಹಿಂದಕ್ಕೆ

ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟುಹಿಡಿದಿದ್ದರೆ, ಆಡಳಿತ ಪಕ್ಷದ ಸದಸ್ಯರು ರಾಜಸ್ಥಾನದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರ ಪ್ರಸ್ತಾಪಿಸಲು ಪ್ರಯತ್ನಿಸಿದ ನಡುವೆಯೇ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಸಂಸದರು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಸಂಸದರು.

ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟುಹಿಡಿದಿದ್ದರೆ, ಆಡಳಿತ ಪಕ್ಷದ ಸದಸ್ಯರು ರಾಜಸ್ಥಾನದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರ ಪ್ರಸ್ತಾಪಿಸಲು ಪ್ರಯತ್ನಿಸಿದ ನಡುವೆಯೇ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 

ಸದನವು ಧ್ವನಿ ಮತದ ಮೂಲಕ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರ ಅಮಾನತು ರದ್ದುಗೊಳಿಸಿದ ನಂತರ, ಬಿಜೆಪಿ ಸದಸ್ಯರು ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

ಆದಾಗ್ಯೂ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಮಣಿಪುರದ ಹಿಂಸಾಚಾರದ ಕುರಿತು ಚರ್ಚೆಗೆ ಒತ್ತಾಯಿಸಿದರು. ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಮತ್ತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಲೇ ಬಂದಿದ್ದು, ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಗದ್ದಲ ಸೃಷ್ಟಿಯಾಗಿದೆ.

ಗದ್ದಲದ ನಡುವೆ, ಸಭಾನಾಯಕ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್, ಮಣಿಪುರದ ಬಗ್ಗೆ ಅಲ್ಪಾವಧಿಯ ಚರ್ಚೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಪ್ರತಿಪಕ್ಷಗಳು ಅದನ್ನು ಚರ್ಚಿಸಲು ಬಯಸುವುದಿಲ್ಲ ಎಂದು ದೂರಿದರು.

ಬಜೆಟ್ ಅಧಿವೇಶನದಲ್ಲಿ ಸದನದ ನಿಯಮಗಳನ್ನು ಉಲ್ಲಂಘಿಸಿ ಕಲಾಪಗಳನ್ನು ವಿಡಿಯೋ ಚಿತ್ರೀಕರಣ ಮಾಡಿ ಹೊರಗೆ ಹಂಚಿಕೊಂಡಿದ್ದಕ್ಕಾಗಿ ರಜನಿ ಪಾಟೀಲ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಸದನವು ಅಮಾನತು ನಿರ್ಣಯ ಅಂಗೀಕರಿಸಿದ ನಂತರವೇ ಅವರನ್ನು ಅಮಾನತುಗೊಳಿಸಲಾಗಿತ್ತು.

ಗದ್ದಲದ ನಡುವೆ ಸಭಾಪತಿ ಜಗದೀಪ್ ಧಂಖರ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ಚೀನಾದ ಹಣ ಭಾರತಕ್ಕೆ ಬರುತ್ತಿದೆ ಎಂಬ ವರದಿ ಕುರಿತು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವಿನ ಘೋಷಣೆಗಳ ಮಧ್ಯೆ ಲೋಕಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಮಧ್ಯಾಹ್ನ 12ಗಂಟೆಗೆ ಸದನ ಮತ್ತೆ ಸೇರುತ್ತಿದ್ದಂತೆ, ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿಯನ್ನು ಪ್ರಸ್ತಾಪಿಸಿದರು. ವರದಿಯಲ್ಲಿ, ವೆಬ್ ಪೋರ್ಟಲ್ NewsClick ಗೆ 38 ಕೋಟಿ ರೂ. ಹಣ ಬಂದಿದೆ ಮತ್ತು ಈ ಹಣವನ್ನು ಭಾರತ ವಿರೋಧಿ ಕೃತ್ಯಗಳಿಗೆ ಬಳಸಲಾಗಿದೆ ಎಂದಿದೆ.

ನ್ಯೂಸ್‌ಕ್ಲಿಕ್ ಭಾರತ ವಿರೋಧಿ 'ತುಕ್ಡೆ ತುಕ್ಡೆ' ಗ್ಯಾಂಗ್‌ನ ಸದಸ್ಯ ಎಂದು ದುಬೆ ಆರೋಪಿಸಿದರು ಮತ್ತು ಹಣದ ಫಲಾನುಭವಿಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

2005 ಮತ್ತು 2014ರ ನಡುವೆ, ಚೀನಾ ಸರ್ಕಾರವು ಕಾಂಗ್ರೆಸ್‌ಗೆ ಹಣವನ್ನು ಪಾವತಿಸಿದೆ. ಕಾಂಗ್ರೆಸ್ ಭಾರತವನ್ನು ವಿಭಜಿಸಲು ಬಯಸುತ್ತಿದೆ ಎಂದು ದುಬೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ಆರೋಪಿಸಿದರು.

ದುಬೆ ಈ ವಿಷಯ ಪ್ರಸ್ತಾಪಿಸಿದಾಗ ರಾಹುಲ್ ಗಾಂಧಿ ಸದನದಲ್ಲಿ ಹಾಜರಿದ್ದರು.

ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪದ ಅಧ್ಯಕ್ಷತೆ ವಹಿಸಿದ್ದ ಕಿರಿತ್ ಸೋಲಂಕಿ ಅವರು ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com