INDIA ಮೈತ್ರಿ ಹಳೆ ಕಟ್ಟಡದ ಮೇಲಿನ ಪ್ಲಾಸ್ಟರ್ ಇದ್ದಂತೆ, 2028ರಲ್ಲೂ ಅವಿಶ್ವಾಸ ನಿರ್ಣಯ ಮಂಡಿಸುತ್ತೀರಿ: ಪ್ರಧಾನಿ ಮೋದಿ

ಪ್ರತಿಪಕ್ಷಗಳ ಮೈತ್ರಿಕೂಟ INDIA ಹಳೆಯ ಕಟ್ಟಡದ ಮೇಲಿನ ಪ್ಲಾಸ್ಟರ್ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗೇಲಿ ಮಾಡಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರತಿಪಕ್ಷಗಳ ಮೈತ್ರಿಕೂಟ INDIA ಹಳೆಯ ಕಟ್ಟಡದ ಮೇಲಿನ ಪ್ಲಾಸ್ಟರ್ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗೇಲಿ ಮಾಡಿದ್ದಾರೆ.

ಇಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ, ದೇಶದ ಜನರು ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ದೇಶದ ಕೋಟಿ ಕೋಟಿ ಜನರಿಗೆ ಧನ್ಯವಾದ ಸಮರ್ಪಿಸುತ್ತೇನೆ. ನಮಗೆ ಭಗವಂತನ ಮೇಲೆ ಹೆಚ್ಚು ನಂಬಿಕೆ ಇದೆ ಎಂದರು.

ಪ್ರತಿಪಕ್ಷಗಳಿಗೆ ಪಾಕಿಸ್ತಾನದ ಮೇಲೆ ವಿಶ್ವಾಸವಿದೆ. ಆದರೆ ಭಾರತೀಯ ಸೇನೆ ಮೇಲೆ ವಿಶ್ವಾಸವಿಲ್ಲ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು INDIAದಲ್ಲಿ ಎರಡು 'ಐ'ಗಳನ್ನು ಸೇರಿಸಿದೆ. ಇಂಡಿಯಾ ಮೈತ್ರಿಯು 'ಘಮಾಂಡಿಯ' ಮೈತ್ರಿಯಾಗಿದ್ದು, ಪ್ರತಿಯೊಬ್ಬರೂ ಅದರ ಲಾಭ ಪಡೆಯಲು ಬಯಸುತ್ತಾರೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಾರೆ, ದೇಶದ ಬಗ್ಗೆ ಯೋಚಿಸಲ್ಲ. ದೇಶಕ್ಕೆ ಜೈಕಾರ ಹಾಕೋದನ್ನು ಇವರು ಸಹಿಸುವುದಿಲ್ಲ. ನಾಲ್ಕು ದಿಕ್ಕೂಗಳಲ್ಲೂ ದೇಶದ ಬಗ್ಗೆ ಜೈಕಾರ ಹಾಕುತ್ತಿದ್ದಾರೆ. ಆದರೆ ವಿಪಕ್ಷ ಸದಸ್ಯರು ಕಪ್ಪು ಬಟ್ಟೆ ಧರಿಸಿ ಸಂಸತ್​ಗೆ ಆಗಮಿಸಿದ್ದಾರೆ ಎಂದರು.

2028 ರಲ್ಲೂ ನನ್ನ ವಿರುದ್ಧ ಮತ್ತೊಂದು ಅವಿಶ್ವಾಸ ನಿರ್ಣಯ ಮಂಡಿಸುತ್ತಾರೆ ಎಂದು ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದರು.

ಈ ವೇಳೆ ಪ್ರತಿಪಕ್ಷಗಳ ಸದಸ್ಯರು ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡುವಂತೆ ಒತ್ತಾಯಿಸಿ, ಮಣಿಪುರ, ಮಣಿಪುರ ಎಂದು ಘೋಷಣೆ ಕೂಗಿದರು.

ಪ್ರತಿಪಕ್ಷಗಳ ಘೋಷಣೆಗಳ ನಡುವೆಯೇ ಮಾತು ಮುಂದುವರೆಸಿದ ಮೋದಿ, ನಮ್ಮ ಗಮನವು ದೇಶದ ಅಭಿವೃದ್ಧಿಯತ್ತ ಇರಬೇಕು. ಇದು ಇಂದಿನ ಅಗತ್ಯವಾಗಿದೆ. ನಮ್ಮ ಯುವಕರು ಕನಸುಗಳನ್ನು ನನಸಾಗಿಸುವ ಶಕ್ತಿ ಹೊಂದಿದ್ದಾರೆ. ನಾವು ಭ್ರಷ್ಟಾಚಾರ ಮುಕ್ತ ಸರ್ಕಾರ, ದೇಶದ ಯುವಕರಿಗೆ ಅವಕಾಶಗಳು ಮತ್ತು ಆಕಾಂಕ್ಷೆಗಳನ್ನು ನೀಡಿದ್ದೇವೆ ಎಂದರು.

ನಾವು ಭಾರತದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದೇವೆ. ಆದರೆ ಜಗತ್ತಿನಲ್ಲಿ ನಮ್ಮ ದೇಶದ ಘನತೆಗೆ ಕಳಂಕ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಇಂದು ಭಾರತದ ಮೇಲೆ ವಿಶ್ವದ ನಂಬಿಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com