
ರಾಯ್ ಪುರ: ಮಹತ್ವದ ಬೆಳವಣಿಗೆಯಲ್ಲಿ ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ನಿಷೇಧಿಸಲು ಛತ್ತೀಸ್ ಘಡ ಸರ್ಕಾರ ನಿರ್ಧರಿಸಿದೆ.
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ, ಕಿರುಕುಳ ಮತ್ತು ಇತರ ಅಪರಾಧಗಳ ಪ್ರಕರಣಗಳ ಆರೋಪಿಗಳನ್ನು ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳಿಂದ ನಿರ್ಬಂಧಿಸಲಾಗುವುದು ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಂಗಳವಾರ ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ರಾಯ್ಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಬಾಘೇಲ್ ತಮ್ಮ ಭಾಷಣದಲ್ಲಿ ಹಲವಾರು ಘೋಷಣೆಗಳನ್ನು ಮಾಡಿದ್ದು, ಈ ಪೈಕಿ ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ನಿಷೇಧಿಸುವುದಾಗಿ ಹೇಳಿದ್ದಾರೆ.
ಅಲ್ಲದೆ ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಮಾಹಿತಿಯನ್ನು ಸೇರಿಸಲಾಗುವುದು ಮತ್ತು ರಾಜ್ಯದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಸಿಎಂ ಬಗೇಲ್ ಘೋಷಿಸಿದ್ದು, "ಮಹಿಳೆಯರ ಸುರಕ್ಷತೆ, ಅವರ ಗೌರವ ಮತ್ತು ಅವರ ಘನತೆಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಹುಡುಗಿಯರು ಮತ್ತು ಮಹಿಳೆಯರಿಗೆ ಕಿರುಕುಳ, ಅವರ ಮೇಲೆ ಅತ್ಯಾಚಾರ ಮತ್ತು ಇತರ (ಮಹಿಳೆಯರ ವಿರುದ್ಧದ ಅಪರಾಧಗಳು) ಆರೋಪಿಗಳನ್ನು ಸರ್ಕಾರಿ ಉದ್ಯೋಗಗಳಿಂದ ನಿಷೇಧಿಸಲು ನಾವು ನಿರ್ಧರಿಸಿದ್ದೇವೆ" ಎಂದು ಹೇಳಿದರು.
ನವ (ಹೊಸ) ಛತ್ತೀಸ್ಗಢವನ್ನು ನಿರ್ಮಿಸುವಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಮುಂದಿನ ಶೈಕ್ಷಣಿಕ ಅಧಿವೇಶನದಿಂದ ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಮಾಹಿತಿಯನ್ನು ಸೇರಿಸುತ್ತದೆ. ಇದರಿಂದ ಮಕ್ಕಳು ಭವಿಷ್ಯದ ತಂತ್ರಜ್ಞಾನಕ್ಕೆ ತಮ್ಮನ್ನು ಸಿದ್ಧಪಡಿಸಿಕೊಳ್ಳಬಹುದು ಎಂದರು.
Advertisement