ಕಾಸರಗೋಡು: ಕೇರಳದಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು ಮುಂದುವರಿದಿದ್ದು, ಬುಧವಾರ ಕೆಲವು ಕಿಡಿಗೇಡಿಗಳು ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕೆಲ್ಲೆಸೆದು ಕಿಟಕಿಯೊಂದಕ್ಕೆ ಹಾನಿ ಮಾಡಿದ್ದಾರೆ.
ಉತ್ತರ ಕಣ್ಣೂರು ಜಿಲ್ಲೆಯಲ್ಲಿ ಎರಡು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ಮೂರು ದಿನಗಳ ನಂತರ ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೋಗುವ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದರ ಪರಿಣಾಮ ಅದರ ಒಂದು ಕಿಟಕಿಗೆ ಹಾನಿಯಾಗಿದೆ. ವಟಕರ ಬಳಿ ಸಂಜೆ 4 ರಿಂದ 4.30 ರ ನಡುವೆ ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ರೈಲಿನ ಸಿ-8 ಬೋಗಿಯ ಕಿಟಕಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಹೊರಗಿನಿಂದ ಗಾಜು ಒಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಿಟಕಿಯ ಗಾಜುಗಳು ತೀವ್ರ ರೀತಿಯಲ್ಲಿ ಹಾನಿಯಾಗಿರುವುದಾಗಿ ಟಿವಿ ಚಾನೆಲ್ ಗಳು ತೋರಿಸಿವೆ.
ಭಾನುವಾರ ಸಂಜೆ ಮಂಗಳೂರು-ಚೆನ್ನೈ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ನೇತ್ರಾವತಿ ಎಕ್ಸ್ಪ್ರೆಸ್ ರೈಲುಗಳು ಕಣ್ಣೂರು ದಕ್ಷಿಣ ಮತ್ತು ವಲಪಟ್ಟಣಂ ನಡುವಿನ ಪ್ರದೇಶವನ್ನು ತಲುಪಿದಾಗ ಕಲ್ಲು ತೂರಾಟ ನಡೆಸಲಾಗಿತ್ತು. ಎರಡೂ ರೈಲುಗಳ ಎಸಿ ಕೋಚ್ಗಳ ಕಿಟಕಿ ಗಾಜು ಹಾಳಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement