ನವದೆಹಲಿ: ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಛತ್ತೀಸ್ಗಢದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ 10 ಗ್ಯಾರೆಂಟಿ ಘೋಷಣೆ ಮಾಡಿರುವುದು ವಿಪಕ್ಷಗಳ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ.
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು I.N.D.I.A ಮೈತ್ರಿಕೂಟದಲ್ಲಿದ್ದು ಕೇಜ್ರಿವಾಲ್ ಕಾಂಗ್ರೆಸ್ ಮಾದರಿಯನ್ನೇ ನಕಲು ಮಾಡುತ್ತಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ.
ಆಪ್ ನಡೆಯಿಂದ ಕಾಂಗ್ರೆಸ್- ಆಮ್ ಆದ್ಮಿ ಪಕ್ಷದ ನಡುವೆ ಮತಗಳು ವಿಭಜನೆಯಾಗಲಿದ್ದು, ಇದರ ಪರಿಣಾಮ ಆಡಳಿತಾರೂಢ ಪಕ್ಷಕ್ಕೆ ಮತ ಪ್ರಮಾಣ ಕುಸಿದು ಅಂತಿಮವಾಗಿ ಬಿಜೆಪಿಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಆಪ್ ಘೋಷಣೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಚತ್ತೀಸ್ ಗಢಕ್ಕೆ ಕೇಜ್ರಿವಾಲ್ ಭೇಟಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರಾಯ್ ಪುರದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರದ ಸಾಧನೆಯನ್ನು ಹೋಲಿಕೆ ಮಾಡಲು ಚರ್ಚೆ ನಡೆಯಲಿ ಎಂದಿದ್ದಾರೆ.
ರಾಯ್ ಪುರಕ್ಕೆ ಏಕೆ ಹೋಗಬೇಕಿತ್ತು? ಚತ್ತೀಸ್ ಗಢದಲ್ಲಿನ ನಮ್ಮ ಸರ್ಕಾರದ ಸಾಧನೆಯನ್ನು ಈ ಹಿಂದಿನ ರಮಣ್ ಸಿಂಗ್ ಸರ್ಕಾರದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ನಿಮ್ಮ ಆಯ್ಕೆಯ ವಲಯವನ್ನು ತೆಗೆದುಕೊಂಡು ಅಲ್ಲಿ ದೆಹಲಿ ಸರ್ಕಾರ ಹಾಗೂ ಇಲ್ಲಿನ ಸರ್ಕಾರದ ಸಾಧನೆಗಳನ್ನು ಹೋಲಿಕೆ ಮಾಡೋಣ ಚರ್ಚೆಗೆ ತಯಾರಿದ್ದೀರಾ? ಎಂದು ಕೇಜ್ರಿವಾಲ್ ಗೆ ಪವನ್ ಖೇರಾ ಸವಾಲು ಹಾಕಿದ್ದಾರೆ.
Advertisement