ನವದೆಹಲಿ: ತನ್ನ ಫೇಸ್ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾಗಲು ಜುಲೈ ತಿಂಗಳಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಮಹಿಳೆ ಅಂಜು ಸ್ವದೇಶಕ್ಕೆ ವಾಪಸಾಗಿದ್ದಾಳೆ. ರಾಜಸ್ಥಾನದ ಭಿವಾಡಿಯ ವಸತಿ ಸಮುಚ್ಛಯದಲ್ಲಿ ವಾಸವಿರುವ ಆಕೆಯ ಮಕ್ಕಳು, ತಾಯಿಯನ್ನು ಭೇಟಿ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ವಾಘಾ ಗಡಿ ಮೂಲಕ ಬಂದಿದ್ದ ಅಂಜುಳನ್ನು ಭದ್ರತಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿ ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದರು. ಅಲ್ಲಿಂದ ಆಕೆ ದೆಹಲಿ ಪಯಣಿಸಿದ್ದಳು. ದೆಹಲಿಯಲ್ಲಿ ಇಳಿದ ಬಳಿಕ ಆಕೆ ಎಲ್ಲಿಗೆ ಹೋಗಿದ್ದಾಳೆ ಎನ್ನುವುದು ತಿಳಿದಿಲ್ಲ. ಆಕೆ ಭಿವಾಡಿಗೆ ತಲುಪಿಲ್ಲ ಹಾಗೂ ತನ್ನ ಮಕ್ಕಳನ್ನು ಭೇಟಿಯಾಗಿಲ್ಲ. ಇದೀಗ ಅಂಜು ಎಲ್ಲಿದ್ದಾಳೆ ಎಂಬುದು ನಿಗೂಢವಾಗಿಯೇ ಉಳಿದಿದೆ.
ಅಂಜು ನೆಲೆಸಿರುವ ವಸತಿ ಸಮುದಾಯಕ್ಕೆ ಇದೀಗ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲ ವಾಹನಗಳು ಮತ್ತು ಅಪರಿಚಿತರನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಆ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ. ಐಬಿ ಅಧಕಾರಿಗಳ ತಂಡವು ಅಂಜು ಅವರ ಮಕ್ಕಳಾದ 15 ವರ್ಷದ ಮಗಳು ಮತ್ತು ಆರು ವರ್ಷದ ಮಗನನ್ನೂ ವಿಚಾರಣೆ ನಡೆಸಿದೆ. ಅಂಜು ಪ್ರಕರಣದ ತನಿಖೆ ನಡೆಯುತ್ತಿದೆ. ಆಕೆ ಈವರೆಗೂ ಭಿವಾಡಿಗೆ ಆಗಮಿಸಿಲ್ಲ.
ಆಕೆ ಎಲ್ಲಿದ್ದಾಳೆ ಎಂಬುದು ಸಹ ಸದ್ಯಕ್ಕೆ ತಿಳಿಯುತ್ತಿಲ್ಲ. ವಿಚಾರಣೆ ನಡೆಸುತ್ತಿದ್ದೇವೆ. ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಭಿವಾಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪಕ್ ಸೈನಿ ಹೇಳಿದ್ದಾರೆ. ಅಂಜು ಅವರನ್ನು ವಿಚಾರಣೆ ನಡೆಸಿದ ಬಳಿಕ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ತನ್ನ ಭಾರತೀಯ ಪತಿ ಅರವಿಂದ್ಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ, ಈ ನಡುವೆ ಅರವಿಂದ್ ಅವರನ್ನು ಪಾಕಿಸ್ತಾನದಿಂದ ಹಿಂದಿರುಗಿದ ಪತ್ನಿಯ ಬಗ್ಗೆ ಕೇಳಿದಾಗ, ಅದು ತನಗೆ ತಿಳಿದಿಲ್ಲ ಮತ್ತು ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.
ತಾನು ಮತ್ತು ಅಂಜು ಇನ್ನೂ ವಿಚ್ಛೇದನ ಪಡೆದಿಲ್ಲ. ವಿಚ್ಛೇದನ ನಡೆಯಲು ಮೂರರಿಂದ ಐದು ತಿಂಗಳು ಬೇಕು ಎಂದು ಅರವಿಂದ್ ಹೇಳಿದ್ದಾರೆ. ಇನ್ನೂ ಅಂಜು ಭಾರತಕ್ಕೆ ಬರಲು ಕೇವಲ ಒಂದು ತಿಂಗಳಿಗೆ ಮಾತ್ರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಕಾನೂನು ತಜ್ಞರ ಪ್ರಕಾರ, ವಿಚ್ಛೇದನದ ನಂತರವೇ ಅವಳು ತನ್ನ ಮಕ್ಕಳನ್ನು ತನ್ನ ಸುಪರ್ದಿಗೆ ಪಡೆಯಬಹುದೇ ಹೊರತು ಅದಕ್ಕಿಂತ ಮೊದಲು ಅಲ್ಲ ಎಂದು ಹೇಳಲಾಗಿದೆ.
ಫಾತಿಮಾ ಎಂದು ಹೆಸರು ಬದಲಿಸಿಕೊಂಡಿರುವ 34 ವರ್ಷದ ಅಂಜು, ಜುಲೈನಿಂದ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ವಾಸಿಸುತ್ತಿದ್ದಾಳೆ. ತನ್ನ ಫೇಸ್ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾದ ಬಳಿಕ ಆಕೆ ಇಸ್ಲಾಂಗೆ ಮತಾಂತರವಾಗಿದ್ದಾಳೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
Advertisement