
ಕೋಲ್ಕತ್ತ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ INDIA ಮೈತ್ರಿಕೂಟದ ಸಭೆ ಡಿ.06 ರಂದು ನಡೆಯಲಿದೆ.
ಕಾಂಗ್ರೆಸ್ ನ ಕಳಪೆ ಸಾಧನೆ ಬಗ್ಗೆ INDIA ಮೈತ್ರಿಕೂಟದ ಸದಸ್ಯರು ಈಗಾಗಲೇ ಹೇಳಿಕೆ ನೀಡುತ್ತಿದ್ದು ಕಾಂಗ್ರೆಸ್ ಮಿತ್ರಪಕ್ಷಗಳೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಡಿ.06 ರ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಗಳಿವೆ. ಇದೇ ದಿನದಂದು ಉತ್ತರ ಬಂಗಾಳದಲ್ಲಿ ಈಗಾಗಲೇ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ ಎಂದು ಮಮತಾ ಬ್ಯಾನರ್ಜಿ ಕಾರಣ ನೀಡಿದ್ದಾರೆ.
INDIA ಮೈತ್ರಿಕೂಟದ ಸಭೆಯ ಬಗ್ಗೆ ನನಗೆ ಅರಿವಿಲ್ಲ. ಆದ್ದರಿಂದಲೇ ನಾನು ಉತ್ತರ ಬಂಗಾಳದಲ್ಲಿ ಹಲವು ಕಾರ್ಯಕ್ರಮಗಳಿಗೆ ತೆರಳುವುದು ನಿಗದಿಯಾಗಿದೆ.
ಉತ್ತರ ಬಂಗಾಳಕ್ಕೆ ತೆರಳಲು ನನಗೆ ಏಳು ದಿನಗಳ ಕಾರ್ಯಕ್ರಮವಿದೆ. ಸಭೆ ಬಗ್ಗೆ ನನಗೆ ತಿಳಿದಿದ್ದರೆ, ನಾನು ಈ ಕಾರ್ಯಕ್ರಮವನ್ನೇಕೆ ನಿಗದಿಪಡಿಸುತ್ತಿದ್ದೆ? ಸಭೆಯ ಬಗ್ಗೆ ಮಾಹಿತಿ ಇದ್ದಿದ್ದರೆ, ನಾನು ಖಂಡಿತವಾಗಿಯೂ ಅದಕ್ಕೆ ಹೋಗುತ್ತಿದ್ದೆ. ಆದರೆ ನಮಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾನು ಉತ್ತರ ಬಂಗಾಳ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ವ್ಯಕ್ತಿಗತವಾಗಿ ಅಷ್ಟೇ ಅಲ್ಲದೇ ಆಕೆಯ ಪಕ್ಷ ತೃಣಮೂಲ ಕಾಂಗ್ರೆಸ್ ಕೂಡ ಸಭೆಯಿಂದ ಹೊರಗುಳಿಯಬಹುದು ಎಂದು ಮೂಲಗಳು ತಿಳಿಸಿವೆ. ಮಮತಾ ಬ್ಯಾನರ್ಜಿ ಅವರ ಘೋಷಣೆಯ ನಂತರ, ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಈ ಸಭೆ "ಅನೌಪಚಾರಿಕ" ಸಭೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement