ಲೋಕಸಭೆಯಿಂದ ಉಚ್ಛಾಟನೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ, ಶೀಘ್ರದಲ್ಲೇ ಅರ್ಜಿ ವಿಚಾರಣೆ ಸಾಧ್ಯತೆ

ತಮ್ಮನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ 49 ವರ್ಷದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಟಿಎನ್ಐಇಗೆ ತಿಳಿಸಿದ್ದಾರೆ.
ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ
ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ

ನವದೆಹಲಿ: ತಮ್ಮನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ 49 ವರ್ಷದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಟಿಎನ್ಐಇಗೆ ತಿಳಿಸಿದ್ದಾರೆ.

ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ನಗದು ಮತ್ತು ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪದಲ್ಲಿ ಮಹುವಾ ಅವರು ತಪ್ಪಿತಸ್ಥರೆಂದು ಹೇಳಿರುವ ನೈತಿಕ ಸಮಿತಿಯ ವರದಿಯನ್ನು ಅಂಗೀಕರಿಸಿರುವ ಲೋಕಸಭೆಯು, ಶುಕ್ರವಾರ ಮಹುವಾ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಉಚ್ಛಾಟಿಸಿತ್ತು. 

ಅದಾನಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಅನಧಿಕೃತ ಜನರಿಗೆ ತನ್ನ ಸಂಸತ್ತಿನ ಲಾಗಿನ್ ಐಡಿಗಳನ್ನು ಹಂಚಿಕೊಂಡಿರುವ ಆರೋಪವೂ ಅವರ ಮೇಲೆ ಕೇಳಿಬಂದಿದೆ.

'ಪ್ರಶ್ನೆಗಾಗಿ ನಗದು ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ್ನು ಲೋಕಸಭೆಯಿಂದ ಉಚ್ಛಾಟಿಸಿರುವುದನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ' ಎಂದು ಅವರ ವಕೀಲರು ಹೇಳಿದರು. ಪ್ರಕರಣದ ಗಂಭೀರತೆಯನ್ನು ಗಮನಿಸಿದರೆ ಅರ್ಜಿಯು ಒಂದು ವಾರದೊಳಗೆ ಅಥವಾ ಇನ್ನೂ ಬೇಗ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಸಂವಿಧಾನದ ಅಡಿಯಲ್ಲಿ ಒದಗಿಸಲಾದ ತಮ್ಮ ಮೂಲಭೂತ ಹಕ್ಕುಗಳನ್ನು ಒದಗಿಸುವಂತೆ ಕೋರಿರುವ ಮಹುವಾ, ನೈತಿಕ ಸಮಿಯಿಯ ಈ ಕ್ರಮವು ಅನ್ಯಾಯದಿಂದ ಕೂಡಿದೆ ಮತ್ತು ಅನಿಯಂತ್ರಿತವಾಗಿದೆ. ಸಮಿತಿಯು ತನ್ನ ವಿರುದ್ಧದ ತನಿಖೆಯ ಸಮಯದಲ್ಲಿ ತನಗೆ ಸ್ವಾಭಾವಿಕ ನ್ಯಾಯವನ್ನು ನಿರಾಕರಿಸಿದೆ ಎಂದು ಹೇಳಿದ್ದಾರೆ.

ನೈತಿಕ ಸಮಿತಿಯ ವರದಿಯ ಮೇಲೆ ಸದನದಲ್ಲಿ ಬಿಸಿ ಚರ್ಚೆ ನಡೆಯಿತು. ಈ ಚರ್ಚೆಯ ವೇಳೆ ಮಹುವಾ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಮಹುವಾ ಅವರು ‘ಅನೈತಿಕವಾಗಿ ನಡೆದುಕೊಂಡಿದ್ದಾರೆ’ ಎಂಬ ಕಾರಣಕ್ಕೆ ಅವರನ್ನು ಉಚ್ಚಾಟಿಸಬೇಕು ಎಂಬ ಗೊತ್ತುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದರು. ಸದನವು ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ಬಳಿಕ ಡಿಸೆಂಬರ್ 8ರಂದು ಮಹುವಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಯಿತು. ನೈತಿಕ ಸಮಿತಿಯ ವರದಿಯು ಟಿಎಂಸಿ ನಾಯಕಿ ವಿರುದ್ಧ ಕಾನೂನು ಮತ್ತು ಸಾಂಸ್ಥಿಕ ತನಿಖೆಯನ್ನು ಶಿಫಾರಸು ಮಾಡಿದೆ.

'ಹೋರಾಟ ಮುಂದುವರಿಸುತ್ತೇನೆ'

ಮಹುವಾ ಮೊಯಿತ್ರಾ ಅವರು ಭಾನುವಾರ ವಿಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು, ಬೆಂಬಲ ನೀಡಿದ ತನ್ನ ಹಿತೈಷಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದ ನೀತಿ ಸಂಹಿತೆಯೊಂದನ್ನು ಉಲ್ಲಂಘಿಸಿರುವುದಾಗಿ ಹೇಳಿ ತಮ್ಮನ್ನು ಉಚ್ಛಾಟಿಸಲಾಗಿದೆ. ತನ್ನ ಉಚ್ಚಾಟನೆಯ ವಿರುದ್ಧ ಹೋರಾಟವನ್ನು ಮುಂದುವರೆಸುವುದಾಗಿ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com