ಸಂಸತ್ತಿನಲ್ಲಿ ಭದ್ರತಾ ಲೋಪ: ಮೈಸೂರು ವ್ಯಕ್ತಿ ಸೇರಿ ನಾಲ್ವರು ಗುಪ್ತಚರ ಇಲಾಖೆ ವಶಕ್ಕೆ, ಸಂದರ್ಶಕರ ಪಾಸ್ ನಿಷೇಧ

ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಮಾಡಿ ಕಲಾಪದ ವೇಳೆ ಸಂಸತ್ ಭವನಕ್ಕೆ ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಅಧಿಕಾರಿಗಳು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಸಂಸತ್ ನಲ್ಲಿ ಭದ್ರತಾ ಉಲ್ಲಂಘನೆ
ಸಂಸತ್ ನಲ್ಲಿ ಭದ್ರತಾ ಉಲ್ಲಂಘನೆ

ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಮಾಡಿ ಕಲಾಪದ ವೇಳೆ ಸಂಸತ್ ಭವನಕ್ಕೆ ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಅಧಿಕಾರಿಗಳು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಮತ್ತು ಇತರೆ ಇಬ್ಬರನ್ನು ಗುಪ್ತಚರ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸಿದೆ. ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಸಂದರ್ಶಕರ ಗ್ಯಾಲರಿಯಿಂದ ಮಹಡಿಗೆ ಹಾರಿ ಕಲಾಪಕ್ಕೆ ಅಡ್ಡಿಪಡಿಸಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು, 'ನಾವು ಅವರ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದೇವೆ. ಶರ್ಮಾ ಅವರು ಮೈಸೂರಿನವರಾಗಿದ್ದು, ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದಾರೆ ಎಂದು ಹೇಳಿದರು.

ಬಂಧಿತರ ತವರಿನತ್ತ ಅಧಿಕಾರಿಗಳ ದೌಡು
ಸ್ಥಳೀಯ ಪೊಲೀಸರೊಂದಿಗೆ ಐಬಿ (Intelligence Bureau-ಗುಪ್ತಚರ ಇಲಾಖೆ) ತಂಡವು ಬಂಧಿತರ ಮನೆಗಳಿಗೆ ವಿವರವಾದ ತನಿಖೆಗಾಗಿ ತಲುಪಿದೆ. ಅವರ ಫೋನ್‌ಗಳನ್ನು ಸಂಗ್ರಹಿಸಲಾಗಿದೆ ಮತ್ತು ಯಾವುದೇ ಸಂಸ್ಥೆಯೊಂದಿಗೆ ಅವರ ಸಂಪರ್ಕಗಳ ಕುರಿತು ಅವರನ್ನು ಪ್ರಶ್ನಿಸಲಾಗಿದೆ. ಅವರಿಂದ ವಶಪಡಿಸಿಕೊಂಡ ಲಿಖಿತ ವಸ್ತುಗಳನ್ನು ತನಿಖೆಗಾಗಿ ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗಾಗಿ ಬಂಧಿತರಾಗಿರುವ ಎಲ್ಲಾ ನಾಲ್ಕು ಜನರ ಹೆಚ್ಚಿನ ವಿವರಗಳನ್ನು ಪಡೆಯಲು ಅವರು ಅನೇಕ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಂತೆಯೇ ನಾವು ಎಲ್ಲಾ ಚೆಕ್ ಪಾಯಿಂಟ್‌ಗಳ ಸಿಸಿಟಿವಿಗಳನ್ನು ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸುವ ಮೊದಲು ಅವರು ದಾಟಿದ ಸ್ಥಳದಿಂದ ಮಾಹಿತಿ ಸಂಗ್ರಹಿಸಿದ್ದೇವೆ" ಎಂದು ಹೇಳಿದರು.

ಹಳೆಯ ಸಂಸತ್ ಭವನದ ಮೇಲಿನ ಭಯೋತ್ಪಾದಕ ದಾಳಿಯ 22 ನೇ ವಾರ್ಷಿಕೋತ್ಸವದಂದು ಭದ್ರತಾ ಉಲ್ಲಂಘನೆಯು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಸ್ಪೀಕರ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ
ಏತನ್ಮಧ್ಯೆ, ಭದ್ರತಾ ಲೋಪದ ಬಗ್ಗೆ ಚರ್ಚಿಸಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಇದಕ್ಕೂ ಮೊದಲು, ಕೆಳಮನೆ ಪುನರಾರಂಭದ ನಂತರ ಮಾತನಾಡಿದ ಸ್ಪೀಕರ್ ಇಬ್ಬರನ್ನು ಬಂಧಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು. ಭದ್ರತೆ ಉಲ್ಲಂಘಿಸಿದ ಇಬ್ಬರನ್ನೂ ಬಂಧಿಸಲಾಗಿದೆ ಮತ್ತು ಅವರೊಂದಿಗಿನ ಸಾಮಗ್ರಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿರುವ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ" ಎಂದು ಸ್ಪೀಕರ್ ಸದನಕ್ಕೆ ತಿಳಿಸಿದರು.

ಸಂದರ್ಶಕರ ಪಾಸ್ ನಿಷೇಧ
ಇದೇ ವೇಳೆ ಮುಂಜಾಗ್ರತಾ ಕ್ರಮವಾಗಿ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪ ವೀಕ್ಷಣೆಗೆ ನೀಡಲಾಗುತ್ತಿದ್ದ ಸಂದರ್ಶರಕ ಪಾಸ್ ಅನ್ನೂ ಕೂಡ ನಿಷೇಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com