ನವದೆಹಲಿ: ಲೋಕಸಭೆಯಲ್ಲಿ ಅಮಾನತುಗೊಂಡಿರುವ ಪ್ರತಿಪಕ್ಷ ಸದಸ್ಯರು ಕೇಳಿದ 27 ಪ್ರಶ್ನೆಗಳನ್ನು ಮಂಗಳವಾರ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.
ಜತೆಗೆ ಒಂದೇ ಪ್ರಶ್ನೆಯನ್ನು ವಿವಿಧ ಸಚಿವರಿಗೆ ಕೇಳಬಯಸಿದ್ದ ಸದಸ್ಯರ ಗುಂಪಿನಿಂದ ಅಮಾನತುಗೊಂಡ ಸಂಸದರ ಹೆಸರನ್ನು ಕೈಬಿಡಲಾಗಿದೆ. ಇತ್ತೀಚೆಗೆ ನಡೆದ ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಹನುಮಾನ್ ಬೆನಿವಾಲ್ ಅವರ ಹೆಸರನ್ನೂ ಕೂಡ ಪಟ್ಟಿಯಿಂದ ಅಳಿಸಿಹಾಕಲಾಗಿದೆ.
ತೆಗೆದುಹಾಕಲಾದ 27 ಪ್ರಶ್ನೆಗಳ ಪೈಕಿ, ಟಿಎಂಸಿಯ ಅಪರುಪ ಪೊದ್ದಾರ್ ಹಾಗೂ ಕಾಂಗ್ರೆಸ್ನ ರಮ್ಯಾ ಹರಿದಾಸ್ ಅವರು ಕೇಳಿದ್ದ 2 ಚುಕ್ಕಿ ಗುರುತಿನ ಪ್ರಶ್ನೆಗಳೂ ಮತ್ತು ಉಳಿದ 25 ಚುಕ್ಕಿ ಗುರುತು ಇಲ್ಲದವು ಸೇರಿವೆ. ಸಾಮಾನ್ಯವಾಗಿ ಮಂತ್ರಿಗಳು ನಕ್ಷತ್ರ ಅಥವಾ ಚುಕ್ಕಿ ಹಾಕಿದ ಪ್ರಶ್ನೆಗಳಿಗೆ ಮೌಖಿಕ ಉತ್ತರಗಳನ್ನು ನೀಡುತ್ತಾರೆ ಮತ್ತು ಚುಕ್ಕಿ ಹಾಕದ ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ನೀಡುತ್ತಾರೆ.
ಸಂಸತ್ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿ, ಭಿತ್ತಿಪತ್ರ ಹಿಡಿದುಕೊಂಡು ಘೋಷಣೆ ಕೂಗಿದ್ದರಿಂದ 46 ಸಂಸದರನ್ನು ಸೋಮವಾರ ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು.
Advertisement