ಇಂಡಿಯಾ ಮೈತ್ರಿಕೂಟ ಗೆದ್ದರೆ ಜಾತಿ ಗಣತಿ: ರಾಹುಲ್ ಪುನರುಚ್ಚಾರ; ನ್ಯಾಯ ಯೋಜನೆ ಜಾರಿ ಎಂದ ಖರ್ಗೆ

ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ದೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲ ಎಂದು ಗುರುವಾರ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಪುನರುಚ್ಚರಿಸಿದರು.
ರಾಹುಲ್  ಗಾಂಧಿ
ರಾಹುಲ್ ಗಾಂಧಿ

ನಾಗ್ಪುರ: ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ದೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲ ಎಂದು ಗುರುವಾರ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಪುನರುಚ್ಚರಿಸಿದರು. ಆದರೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಬಡವರಿಗೆ ನ್ಯಾಯ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಛೇರಿ ಹೊಂದಿರುವ ನಾಗ್ಪುರ ನಗರದಲ್ಲಿ ಕಾಂಗ್ರೆಸ್‌ನ 139 ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ 'ಹೈನ್ ತಯ್ಯರ್ ಹಮ್' (ನಾವು ಸಿದ್ಧರಿದ್ದೇವೆ) ಎಂಬ ಬೃಹತ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಉಭಯ ನಾಯಕರು, 2024 ರ ಲೋಕಸಭಾ ಚುನಾವಣೆಗೆ ರಣ ಕಹಳೆ ಊದಿದರು. 

ನಾಗ್ಪುರ ಎರಡು ಸಿದ್ಧಾಂತಗಳನ್ನು ಹೊಂದಿದೆ. ಒಂದು ಡಾ.ಬಿ.ಆರ್. ಅಂಬೇಡ್ಕರ್ ಅವರದಾದ ಪ್ರಗತಿಪರವಾದ ಇನ್ನೊಂದು "ರಾಷ್ಟ್ರವನ್ನು ನಾಶಮಾಡುವ" ಆರ್‌ಎಸ್‌ಎಸ್‌ ಎಂದು ಖರ್ಗೆ ಹೇಳಿದರು. ನಗರವು ದೀಕ್ಷಾಭೂಮಿಯ ನೆಲೆಯಾಗಿದೆ. ಇಲ್ಲಿ ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. 

ರಾಜಕೀಯ ಅಧಿಕಾರದ ಹೋರಾಟದ ಅಡಿಪಾಯ ಸಿದ್ಧಾಂತವಾಗಿದೆ. ಸಾಮಾನ್ಯ ಜನರಿಗೆ ಅಧಿಕಾರವನ್ನು ಹಸ್ತಾಂತರಿಸುವುದೇ ಕಾಂಗ್ರೆಸ್‌ನ ಉದ್ದೇಶವಾಗಿದೆ.  ಬಿಜೆಪಿ ಸರ್ಕಾರ ಹೆಚ್ಚಿನ ಸಂಖ್ಯೆಯ ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ ಎಂದು ಅವರು ಕಿಡಿಕಾರಿದರು."ನಮಗೆ ಎರಡು ಭಾರತಗಳು ಬೇಡ. ಇಂಡಿಯಾ ಒಕ್ಕೂಟ ಮಾತ್ರ ಯುವ ಜನತೆಗೆ ಉದ್ಯೋಗ ನೀಡಬಲ್ಲದು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇಂಡಿಯಾ ಮೈತ್ರಿ ಸರ್ಕಾರ ಜಾತಿ ಸಮೀಕ್ಷೆ ನಡೆಸಲಿದೆ ಎಂದು ಪುನರುಚ್ಚರಿಸಿದರು.

"ಮೋದಿ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಯುವಕರಿಗೆ ಉದ್ಯೋಗ ನೀಡಿದೆ? ನಿರುದ್ಯೋಗವು ಈಗ ಸಾರ್ವಕಾಲಿಕ ಎತ್ತರದಲ್ಲಿದೆ. ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ವಿವಿಧ ಕ್ಷೇತ್ರಗಳಲ್ಲಿ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವಿಲ್ಲ ಎಂದು ಗಾಂಧಿ ಪ್ರತಿಪಾದಿಸಿದರು.

ಮರಾಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ, ನಾಗ್ಪುರ ಕ್ರಾಂತಿಕಾರಿಗಳ ನಾಡು, ಇಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಅವರು ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. "ಬಿಜೆಪಿ ಮತ್ತು ಆರೆಸ್ಸೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಪ್ರಜಾಪ್ರಭುತ್ವವು ಕೊನೆಗೊಳ್ಳುತ್ತದೆ, ನಾಗ್ಪುರದಲ್ಲಿ ಎರಡು ಸಿದ್ಧಾಂತಗಳಿವೆ, ಒಂದು ಅಂಬೇಡ್ಕರ್ ಅವರ ಪ್ರಗತಿಪರ ಸಿದ್ಧಾಂತವಾಗಿದೆ, ಮತ್ತು ಇನ್ನೊಂದು ದೇಶವನ್ನು ನಾಶಮಾಡುತ್ತಿರುವುದು ಆರ್ ಎಸ್ ಎಸ್ ಎಂದು ಹಿರಿಯ ನಾಯಕ ಹೇಳಿದರು. 

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದ್ದಾರೆ ಎಂದು ಆರೋಪಿಸಿದ ಖರ್ಗೆ, "ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹಣದುಬ್ಬರವು ಗಗನಕ್ಕೇರಿದೆ, ಮತ್ತು ನಿರುದ್ಯೋಗವೂ ಹೆಚ್ಚಾಗಿದೆ. 30 ಲಕ್ಷ ಹುದ್ದೆಗಳು ಖಾಲಿ ಇವೆ, 
ಮೋದಿ ಸರ್ಕಾರದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಿದ್ದರೆ ಬಡವರು ಹೆಚ್ಚು ಬಡವರಾಗುತ್ತಿದ್ದಾರೆ ಎಂದು ಆರೋಪಿಸಿದರು.

2019ರ ಚುನಾವಣೆಗೂ ಮುನ್ನಾ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ರೂ. 6,000 ನೀಡುವುದಾಗಿ ಕಾಂಗ್ರೆಸ್ ಘೋಷಿಸಿದ್ದ ಯೋಜನೆಯನ್ನು ಉಲ್ಲೇಖಿಸಿದ ಖರ್ಗೆ, 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರು ಸೇರಿದಂತೆ ಬಡವರ ಸಬಲೀಕರಣಕ್ಕಾಗಿ ನ್ಯಾಯ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com