ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದ್ದು, ಎನ್ ಡಿಎ ಮೈತ್ರಿಕೂಟದ ವಿರುದ್ಧ ರಚನೆಯಾಗಿರುವ INDIA ಮೈತ್ರಿಕೂಟದಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ತಲೆದೋರಿದೆ.
ಮೈತ್ರಿಕೂಟದಲ್ಲಿನ ಕೆಲವು ಮಿತ್ರಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಅಥವಾ ತಮ್ಮ ರಾಜ್ಯಗಳಲ್ಲಿ ಸ್ಥಾನಗಳಲ್ಲಿ ರಾಜಿ ಮಾಡಿಕೊಳ್ಳುವುದಕ್ಕೆ ತಯಾರಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷವೇ ದೊಡ್ಡ ಪಕ್ಷವಾಗಿದ್ದು ಸೀಟು ಹಂಚಿಕೆ ಮಾತುಕತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
"ಇದು ಮಹಾರಾಷ್ಟ್ರ, ಮತ್ತು ಇಲ್ಲಿ ಶಿವಸೇನೆ ದೊಡ್ಡ ಪಕ್ಷ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ನ ನಿರ್ಧಾರ ತೆಗೆದುಕೊಳ್ಳುವ ನಾಯಕರೊಂದಿಗೆ ಉದ್ಧವ್ ಠಾಕ್ರೆ ಸಕಾರಾತ್ಮಕ ಚರ್ಚೆ ನಡೆಸುತ್ತಿದ್ದಾರೆ. ದಾದ್ರಾ ಮತ್ತು ನಗರ್ ಹವೇಲಿ ಸೇರಿದಂತೆ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಯಾವಾಗಲೂ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಮತ್ತು ಅದು ದೃಢವಾಗಿರುತ್ತದೆ ಎಂದು ರಾವತ್ ಹೇಳಿದರು.
ಶಿವಸೇನೆ (ಯುಬಿಟಿ) ಗಿಂತ ಮೊದಲು, ಮಮತಾ ಬ್ಯಾನರ್ಜಿ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಇಂಗಿತವನ್ನು ಗುರುವಾರ ವ್ಯಕ್ತಪಡಿಸಿದ್ದಾರೆ.
ಉತ್ತರ 24 ಪರಗಣದಲ್ಲಿನ ಸಭೆಯೊಂದರಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ, "ದೇಶದಾದ್ಯಂತ INDIA ಮೈತ್ರಿ ಇರುತ್ತದೆ. ಬಂಗಾಳದಲ್ಲಿ ಟಿಎಂಸಿ ಬಿಜೆಪಿಯನ್ನು ಸೋಲಿಸುತ್ತದೆ. ನೆನಪಿಡಿ, ಬಂಗಾಳದಲ್ಲಿ ಟಿಎಂಸಿ ಮಾತ್ರ ಬಿಜೆಪಿಗೆ ಪಾಠ ಕಲಿಸುತ್ತದೆಯೇ ಹೊರತು ಬೇರೆ ಯಾವುದೇ ಪಕ್ಷವಲ್ಲ" ಎಂದು ಹೇಳಿದ್ದಾರೆ.
ಎಲ್ಲ ಪಕ್ಷಗಳೊಂದಿಗೆ ಒಪ್ಪಂದದ ಕುರಿತು ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ‘ನಾವು ಮುಕ್ತ ಮನಸ್ಸಿನಿಂದ ಸೀಟು ಹಂಚಿಕೆ ಮಾತುಕತೆ ನಡೆಸುತ್ತೇವೆ ಮತ್ತು ಸಾರ್ವಜನಿಕ ಹೇಳಿಕೆಗಳಿಂದ ದೂರವಿರುತ್ತೇವೆ ಎಂದು ಸಂವಹನ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
Advertisement