ರಾಮಮಂದಿರ ಉದ್ಘಾಟನಾ ಸಮಾರಂಭ: ಇನ್ನೂ ಆಹ್ವಾನ ಬಂದಿಲ್ಲ: ಉದ್ಧವ್ ಠಾಕ್ರೆ
ಮುಂಬೈ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಇನ್ನೂ ಆಹ್ವಾನ ಸ್ವೀಕರಿಸಿಲ್ಲ ಎಂದು ಶಿವಸೇನೆ-ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ. ರಾಮ ಲಲ್ಲಾ ಎಲ್ಲರಿಗೂ ಸೇರಿದವರಾಗಿರುವುದರಿಂದ ತನಗೆ ಔಪಚಾರಿಕ ಆಹ್ವಾನದ ಅಗತ್ಯವಿಲ್ಲ, ಉತ್ತರ ಪ್ರದೇಶದ ಅಯೋಧ್ಯೆಗೆ ಬಯಸಿದಾಗಲೆಲ್ಲಾ ಭೇಟಿ ನೀಡುವುದಾಗಿ ಹೇಳಿದರು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ಹಲವಾರು ಪ್ರಮುಖ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರನ್ನು ಈ ಮಹಾ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ರಾಮಜನ್ಮಭೂಮಿ ಆಂದೋಲನಕ್ಕಾಗಿ ಶಿವಸೇನೆ ಸುದೀರ್ಘ ಹೋರಾಟ ನಡೆಸಿದೆ. ಉಪಚುನಾವಣೆ ಸಂದರ್ಭದಲ್ಲಿ ರಾಮಮಂದಿರ ಮತ್ತು ಹಿಂದುತ್ವದ ಪ್ರಚಾರಕ್ಕಾಗಿ ತಮ್ಮ ತಂದೆ ಮತ್ತು ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ನನಗೆ ಇನ್ನೂ ಯಾವುದೇ ಆಹ್ವಾನ ಬಂದಿಲ್ಲ ಮತ್ತು ರಾಮಲಲ್ಲಾ ಎಲ್ಲರಿಗೂ ಸೇರಿದವನಾಗಿರುವುದರಿಂದ ನನಗೆ ಆಹ್ವಾನದ ಅಗತ್ಯವಿಲ್ಲ. ನನಗೆ ಅನಿಸಿದಾಗ ಹೋಗುತ್ತೇನೆ. ರಾಮ ಮಂದಿರ ಚಳವಳಿಗೆ ಶಿವಸೇನೆ ಸಾಕಷ್ಟು ಕೊಡುಗೆ ನೀಡಿದೆ" ಎಂದು ಇಂಡಿಯಾ ಮೈತ್ರಿಕೂಟದ ಸದಸ್ಯ ಠಾಕ್ರೆ ಹೇಳಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗಲೂ ಅಯೋಧ್ಯೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಠಾಕ್ರೆ, ರಾಮಲಲ್ಲಾ ಪ್ರತಿಷ್ಠಾಪನಾ ಸಮಾರಂಭ ರಾಜಕೀಯ ವೇದಿಕೆಯಾಗಬಾರದು ಎಂದು ನಿರೀಕ್ಷಿಸುತ್ತೇನೆ. ಶ್ರೀರಾಮ ಯಾವುದೇ ಒಂದು ಪಕ್ಷದ ಆಸ್ತಿಯಲ್ಲ. ಇದು ಕೋಟ್ಯಂತರ ಜನರ ನಂಬಿಕೆಯ ವಿಷಯವಾಗಿದೆ. ಸುಪ್ರೀಂ ಕೋರ್ಟ್ನ ತೀರ್ಪು ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದ್ದು, ಅದರಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ