ಅಮರಾವತಿ: ಕಳೆದ ವರ್ಷ ಅಕ್ಟೋಬರ್ -ಡಿಸೆಂಬರ್ ನಲ್ಲಿ ವಿವಾಹವಾದ ಅರ್ಹ 4,536 ಹೆಣ್ಣು ಮಕ್ಕಳಿಗೆ ವೈಎಸ್ ಆರ್ ಕಲ್ಯಾಣಮಸ್ತು ಮತ್ತು ವೈಎಸ್ ಆರ್ ಶಾಧಿ ತೋಫ ಯೋಜನೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ರೂ. 38.18 ಕೋಟಿ ಬಿಡುಗಡೆ ಮಾಡಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು ಹಾಗೂ ಕಟ್ಟಡ ಕಾರ್ಮಿಕ ವರ್ಗದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಈ ಮೊತ್ತ ನೇರವಾಗಿ ಜಮಾ ಆಗಲಿದೆ.
ವರ್ಚುಯಲ್ ಮೂಲಕ ಹಣ ವರ್ಗಾಯಿಸಿ ಮಾತನಾಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಬಾಲ್ಯ ವಿವಾಹ ತಡ ಮತ್ತು ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸುವ ಮತ್ತಿತರ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ದುರ್ಬಲ ವರ್ಗದ ಮಕ್ಕಳನ್ನು ಪ್ರೋತ್ಸಾಹಿಸುವ ಯೋಜನೆಯ ಲಾಭ ಪಡೆಯಲು ವಧು-ವರರು 10ನೇ ತರಗತಿ ತೇರ್ಗಡೆಯಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅವರು ತಿಳಿಸಿದರು.
ಟಿಡಿಪಿ ಆಡಳಿತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ತಲಾ ರೂ. 40 ಸಾವಿರದಿಂದ ಗರಿಷ್ಠ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತಿತ್ತು. ವೈಎಸ್ ಆರ್ ಸಿಪಿ ಸರ್ಕಾರ ಅದನ್ನು ರೂ.1 ಲಕ್ಷದವರೆಗೆ ಏರಿಸಿದೆ. ಅಂಗವಿಕಲರಿಗೆ ರೂ. 1.5 ಲಕ್ಷ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.
ಅಂತರ್ಜಾತಿ ವಿವಾಹವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ರೂ. 1.2 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
Advertisement