ತಿರುವನಂತಪುರಂ: ಕೇಂದ್ರ ಸಚಿವ ವಿ. ಮುರಳೀಧರನ್ ಮನೆ ಮೇಲೆ ದಾಳಿ, ವ್ಯಕ್ತಿ ಬಂಧನ
ತಿರುವನಂತಪುರಂ: ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಮನೆ ಮೇಲೆ ಗುರುವಾರ ದಾಳಿ ನಡೆಸಿದ ಆರೋಪದ ಮೇರೆಗೆ 45 ವರ್ಷದ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಮಧ್ಯರಾತ್ರಿ ಬಂಧಿಸಲಾಗಿರುವ ವ್ಯಕ್ತಿಯನ್ನು ಕೆ. ವಿ ಮನೋಜ್ ಎಂದು ಗುರುತಿಸಲಾಗಿದೆ. ಈತ ಹೋಟೆಲ್ ವೊಂದರ ಮಾಜಿ ನೌಕರನಾಗಿದ್ದು, ಕೇರಳದ ಪಯ್ಯನೂರು ಗ್ರಾಮದ ನಿವಾಸಿ ಎನ್ನಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ತಿರುವನಂತಪುರಂ ರೈಲು ನಿಲ್ದಾಣದ ಬಳಿ ಕಸ್ಟಡಿಗೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮನೋಜ್ ಸಮಸ್ಯೆಗೆ ಕೇಂದ್ರ ಸಚಿವರು ಪರಿಹಾರ ದೊರಕಿಸದ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಮನೆಯಲ್ಲಿನ ಕಿಟಕಿ, ಗಾಜುಗಳಿಗೆ ಹಾನಿಯುಂಟು ಮಾಡಲಾಗಿದೆ. ದಾಳಿ ವೇಳೆ ಯಾವುದೇ ಕಳ್ಳತನದ ಪ್ರಯತ್ನ ನಡೆದಿಲ್ಲ. ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಕಾಣೆಯಾದ ಬಗ್ಗೆ ವರದಿಯಾಗಿಲ್ಲ ಮತ್ತು ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದಾಳಿಯ ನಂತರ ಮನೋಜ್ ಮನೆಯಿಂದ ಹೊರಬಂದಿರುವುದು ಪೊಲೀಸರಿಗೆ ಕಂಡುಬಂದಿದೆ. ದಾಳಿ ವೇಲೆ ಉಳ್ಳೂರಿನ ಮನೆಯ ಮುಂಭಾಗದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಕಿಟಕಿಯ ಗಾಜುಗಳನ್ನು ಗುರಿಯಾಗಿಸಲು ಬಳಸಲಾದ ಕಲ್ಲು ಮತ್ತು ರಕ್ತದ ಕಲೆಗಳನ್ನು ಪೊಲೀಸರು ಸ್ಥಳದಲ್ಲಿ ವಶಕ್ಕೆ ಪಡೆದಿದ್ದಾರೆ.
ಘಟನೆ ನಡೆದಾಗ ಸಚಿವರು ಮನೆಯಲ್ಲಿ ಇರಲಿಲ್ಲ. ಮುರಳೀಧರನ್ ಅವರು ತಿರುವನಂತಪುರಂನಲ್ಲಿರುವಾಗ ಸಾಮಾನ್ಯವಾಗಿ ಈ ಮನೆಯಲ್ಲಿಯೇ ಇರುತ್ತಾರೆ ಮತ್ತು ಅವರ ಕಚೇರಿಯು ಮನೆಯ ಹಿಂಭಾಗದಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ