ನಿತೀಶ್ ಕುಮಾರ್ ಫಿಟ್ ಅಂಡ್ ಫೈನ್; 2030ರವರೆಗೂ ಬಿಹಾರ ಸಿಎಂ ಆಗುವ ಸಾಮರ್ಥ್ಯವಿದೆ: ಜೆಡಿಯು

ನಿತೀಶ್ ಕುಮಾರ್ ಆರೋಗ್ಯವಾಗಿದ್ದಾರೆ, ಅವರ ರಾಜಕೀಯ ಗ್ರಾಫ್ ಕೂಡ ಏರುತ್ತಿದೆ. ಜೆಡಿಯು ಎಂದರೆ ನಿತೀಶ್ ಎಂಬಂತಿದೆ, ಅವರ ನಾಯಕತ್ವಕ್ಕೆ ಯಾವುದೇ ಸವಾಲು ಇಲ್ಲ ಎಂದು ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on

ಪಾಟ್ನಾ: 2025ರ ಬಿಹಾರ ವಿಧಾನಸಭೆ ಚುನಾವಣೆ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಹೇಳಿದ್ದರು.

ಆದರೆ ಇದರ ಬೆನ್ನಲ್ಲೇ ಬಿಹಾರ ಜೆಡಿಯು ಮುಖಂಡ, ಕೆ ಸಿ ತ್ಯಾಗಿ ಮಾತನಾಡಿ, 2030ರ ವಿಧಾನಸಭೆ ಚುನಾವಣೆ ವರೆಗೂ ನಿತೀಶ್ ಕುಮಾರ್ ಅವರಿಗೆ ಸಿಎಂ ಆಗುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಆರೋಗ್ಯವಾಗಿದ್ದಾರೆ, ಅವರ ರಾಜಕೀಯ ಗ್ರಾಫ್ ಕೂಡ ಏರುತ್ತಿದೆ. ಜೆಡಿಯು ಎಂದರೆ ನಿತೀಶ್ ಎಂಬಂತಿದೆ, ಅವರ ನಾಯಕತ್ವಕ್ಕೆ ಯಾವುದೇ ಸವಾಲು ಇಲ್ಲ ಎಂದು ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಹಾಮೈತ್ರಿಕೂಟಕ್ಕೆ ಸೇರುವಾಗ ಜೆಡಿಯು ರಾಷ್ಚ್ರೀಯ ಅಧ್ಯಕ್ಷ ಲಲನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಹೀಗಾಗಿ ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಬಾರದು ಎಂದು ತ್ಯಾಗಿ ಸಲಹೆ ನೀಡಿದ್ದಾರೆ.

ಪಕ್ಷಕ್ಕೆ ಉಪೇಂದ್ರ ಕುಶ್ವಾಹಾ ರಾಜೀನಾಮೆ ನೀಡಿದ ನಂತರ ಚುನಾವಣೆಯಲ್ಲಿ ಜೆಡಿ (ಯು) ಪ್ರದರ್ಶನದ ಪರಿಣಾಮದ ಬಗ್ಗೆ ಮಾತನಾಡಿದ ತ್ಯಾಗಿ ಅವರು,  2010 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿ (ಯು) ಸ್ವಂತವಾಗಿ 118 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷ ಅಧಿಕಾರಕ್ಕೆ ಮರಳಿತ್ತು ಎಂದರು.

ಯಾವುದೇ ನಾಯಕನ ಸೇರ್ಪಡೆ ಅಥವಾ ನಿರ್ಗಮನದಿಂದಾಗಿ ಪಕ್ಷದ ಬೆಂಬಲದ ನೆಲೆಯು ವಿಸ್ತಾರಗೊಳ್ಳುತ್ತದೆ ಅಥವಾ ಕುಗ್ಗುತ್ತದೆ ಎಂದು ನಾನು ಭಾವಿಸುವುದಿಲ್ಲ. ನಿತೀಶ್ ಅವರ ಇಮೇಜ್ ಮತ್ತು ಅವರ ಸಾಮರ್ಥ್ಯದ ಮೇಲೆ ಯಾವುದೇ ಪ್ರಶ್ನಾರ್ಥಕ ಚಿಹ್ನೆ ಇಲ್ಲ ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಬಿಂಬಿಸಿದ ನಿತೀಶ್ ಅವರು ಪಕ್ಷವನ್ನು ಆರ್‌ಜೆಡಿ ಕೈಯಲ್ಲಿ ಅಡಮಾನವಿಟ್ಟಿದ್ದಾರೆ ಎಂದು ಆರೋಪಿಸಿ ಉಪೇಂದ್ರ ಕುಶ್ವಾಹ ಅವರು ಜೆಡಿಯುಗೆ ರಾಜೀನಾಮೆ ನೀಡಿದ್ದರು. ಕುಶ್ವಾಹ ಅವರು ತಮ್ಮದೇ ಆದ ಪಕ್ಷವಾದ ರಾಷ್ಟ್ರೀಯ ಲೋಕ ಜನತಾ ದಳ (ಆರ್‌ಎಲ್‌ಜೆಡಿ) ಆರಂಭಿಸಿದ್ದಾರೆ.

ನಿತೀಶ್ ಅವರು ಮಹಾಮೈತ್ರಿಕೂಟಕ್ಕೆ ಮರಳಿದಾಗ ಮತ್ತು ಬಿಹಾರದಲ್ಲಿ ಹೊಸ ಸರ್ಕಾರವನ್ನು ರಚಿಸಿದಾಗಿನಿಂದ, ಅವರು ತೇಜಸ್ವಿ ಅವರ ಬಗ್ಗೆ ವಿಶೇಷ ಪ್ರೀತಿಯನ್ನು ತೋರಿಸಿದ್ದಾರೆ, ಭವಿಷ್ಯದಲ್ಲಿ ಆರ್‌ಜೆಡಿ ನಾಯಕ ಬಿಹಾರವನ್ನು ನೋಡಿಕೊಳ್ಳುತ್ತಾರೆ ಎಂದು ಪತ್ರಕರ್ತರಿಗೆ ತಿಳಿಸಿದರು. 2025 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ಮಹಾಮೈತ್ರಿಕೂಟವನ್ನು ಮುನ್ನಡೆಸಲಿದ್ದಾರೆ ಎಂದು ಅವರು ಹೇಳಿದ್ದರು, ಕುಶ್ವಾಹಾ ಅವರು ನಿತೀಶ್ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿದ್ದರು.

ಸೋಮವಾರ ಜೆಡಿ (ಯು) ತೊರೆಯುವ ಮೊದಲು, ಕುಶ್ವಾಹಾ ಅವರು ಜೆಡಿ (ಯು) ಅಧ್ಯಕ್ಷ ಲಾಲನ್ ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆಯುವಂತೆ ಮತ್ತು ಪಕ್ಷವು ಮಹಾಮೈತ್ರಿಕೂಟಕ್ಕೆ ಸೇರುವ ಮೊದಲು ಮತ್ತು ಹೊಸ ಸರ್ಕಾರವನ್ನು ರಚಿಸುವ ಮೊದಲು ಯಾವುದೇ ಒಪ್ಪಂದವನ್ನು ಮಾಡಿಕೊಂಡಿದ್ದರೆ ಸ್ಪಷ್ಟಪಡಿಸುವಂತೆ ಸೂಚಿಸಿದ್ದರು.

2024 ರ ಲೋಕಸಭೆ ಚುನಾವಣೆಗೆ ಮುನ್ನ ನಿತೀಶ್ ಅವರು ರಾಷ್ಟ್ರೀಯ ರಾಜಕೀಯಕ್ಕೆ ತೆರಳುತ್ತಾರೆ, ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಮೈತ್ರಿ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುವುದರಿಂದ ತೇಜಸ್ವಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೇಮಿಸಲಾಗುತ್ತದೆ ಎಂದು ಈಗಾಗಲೇ ವ್ಯಾಪಕ ಊಹಾಪೋಹಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com