ಬೆಳಗಾವಿ: ಇಂದಿನ ಬದಲಾಗುತ್ತಿರುವ ಭಾರತದಲ್ಲಿ ಪ್ರತಿ ವಂಚಿತ ವರ್ಗದ ಜನರಿಗೆ ಅವಕಾಶಗಳು ತೆರೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನಗಳನ್ನು ಎತ್ತಿ ತೋರಿಸಿದ ಅವರು, ಕೇಂದ್ರ ಸರ್ಕಾರದ ಈ ಯೋಜನೆಯು ದೇಶದ 80 ರಿಂದ 85 ಪ್ರತಿಶತದಷ್ಟು ರೈತರಿಗೆ ಪ್ರಯೋಜನಕಾರಿಯಾಗಿದೆ, ಅವರಲ್ಲಿ ಹೆಚ್ಚಿನವರು ಸಣ್ಣ ಮಟ್ಟದ ರೈತರಾಗಿದ್ದಾರೆ ಎಂದು ಹೇಳಿದರು.
ನಿನ್ನೆ ಕುಂದಾನಗರಿ ಬೆಳಗಾವಿಯಲ್ಲಿ ಹಲವು ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ನಾವು ದೇಶದ ಎಲ್ಲಾ ರೈತರನ್ನು ಬೆಳಗಾವಿಗೆ ಜೋಡಿಸಿದ್ದೇವೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಮತ್ತೊಂದು ಕಂತು ಇಂದು ಒಂದೇ ಹಂತದಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 16,000 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಕಂತು ಜಮಾ ಮಾಡಲಾಗಿದೆ ಎಂದು ಹೇಳಿದರು.
ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ, ಆ ಪಕ್ಷದ ಪ್ರಧಾನಿ ಹೇಳುತ್ತಿದ್ದರು, ನಾವು 1 ರೂಪಾಯಿ ಬಿಡುಗಡೆ ಮಾಡಿದರೆ, ಫಲಾನುಭವಿಗೆ ಅಂತಿಮವಾಗಿ 15 ಪೈಸೆ ಮಾತ್ರ ಸಿಗುತ್ತದೆ ಎಂದು. ಕಾಂಗ್ರೆಸ್ ಆಡಳಿತದಲ್ಲಿ ಫಲಾನುಭವಿಗಳಿಗೆ 16,000 ರೂಪಾಯಿಗಳು ಸಿಗುತ್ತಿರಲಿಲ್ಲ. ಇದು ರೈತರ ಪಾಲಿಗೆ ಹೋಳಿ ಬೋನಸ್ ಎಂದು ಹೇಳಿದರು.
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶವು ವೇಗವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಹೇಳಿದ ಅವರು, ತಮ್ಮ ಸರ್ಕಾರವು ಕೃಷಿಯನ್ನು ಆಧುನಿಕತೆಗೆ ಜೋಡಿಸುತ್ತಿದೆ. ಕೃಷಿ ಕ್ಷೇತ್ರವನ್ನು ತ್ವರಿತ ಮುಖದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
"ನಾನು 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ದೇಶದ ಒಟ್ಟು ಕೃಷಿ ಬಜೆಟ್ ಕೇವಲ 25,000 ಕೋಟಿ ರೂಪಾಯಿಗಳಷ್ಟಿತ್ತು ಮತ್ತು ಈಗ ಅದು 1.25 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಬಜೆಟ್ ಐದು ಪಟ್ಟು ಹೆಚ್ಚಾಗಿದೆ. ಅಂತಹ ಬದಲಾವಣೆಯು ಬಿಜೆಪಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದೇಶದ ರೈತರಿಗೆ ಸಹಾಯ ಮಾಡಿ ಜನ್ ಧನ್ ಖಾತೆಗಳು, ಮೊಬೈಲ್ ಫೋನ್ ಸಂಪರ್ಕಗಳ ಹೆಚ್ಚಳ ಮತ್ತು ಆಧಾರ್ನ ಪರಿಣಾಮಕಾರಿ ಬಳಕೆಯು ಸರ್ಕಾರದ ಕೃಷಿ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಇದೆ ಎಂದರು.
ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಕಬ್ಬಿನ ಉತ್ಪಾದನೆಯನ್ನು ಹೆಚ್ಚಿಸಲು ತಮ್ಮ ಸರ್ಕಾರವು ತೆಗೆದುಕೊಳ್ಳುತ್ತಿರುವ ಸಮಗ್ರ ಕ್ರಮಗಳನ್ನು ಪ್ರಧಾನಿ ಎತ್ತಿ ತೋರಿಸಿದರು. ಅವರು ರಾಗಿಯನ್ನು ಬಳಸುವ ಮತ್ತು ಬೆಳೆಯುವ ಮಹತ್ವವನ್ನು ವಿವರಿಸಿದರು. ರಾಗಿ ಉತ್ಪಾದನೆಯಲ್ಲಿ ಕರ್ನಾಟಕದ ರೈತರ ಪ್ರಯತ್ನಗಳನ್ನು ಶ್ಲಾಘಿಸಿದರು.
Advertisement