ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಎನ್ಸಿಪಿ ನಾಯಕರ ಬೃಹತ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ ಅವರು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಶರದ್ ಪವಾರ್ ಶನಿವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಅಡಿಯಲ್ಲಿಯೇ ಎಲ್ಲಾ ಕೇಂದ್ರೀಯ ಸಂಸ್ಥೆಗಳು ಇವೆ. ಅವರು ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಶಿಕ್ಷಿಸಬೇಕು ಎಂದು ನಾಸಿಕ್ ಜಿಲ್ಲೆಯ ಯೋಲಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಹೇಳಿದರು.
ಅವರ ಸೋದರಳಿಯ ಅಜಿತ್ ಪವಾರ್ ಮತ್ತು ಇತರ ಎಂಟು ಎನ್ಸಿಪಿ ಶಾಸಕರು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಒಂದು ವಾರದ ನಂತರ, ಶರದ್ ಪವಾರ್ ಅವರು ಪಕ್ಷದ ಬಂಡಾಯ ನಾಯಕ ಮತ್ತು ಸಚಿವ ಛಗನ್ ಭುಜಬಲ್ ಅವರ ಕ್ಷೇತ್ರವಾದ ಯೋಲಾದಲ್ಲಿ ರ್ಯಾಲಿ ನಡೆಸುವ ಮೂಲಕ ರಾಜ್ಯಾದ್ಯಂತ ತಮ್ಮ ಪ್ರವಾಸವನ್ನು ಪ್ರಾರಂಭಿಸಿದರು.
ಮುಂಬೈನಿಂದ ಉತ್ತರಕ್ಕೆ 250 ಕಿಮೀ ದೂರದಲ್ಲಿರುವ ಯೋಲಾ ಎಂಬ ಸಣ್ಣ ಪಟ್ಟಣವನ್ನು ಪವಾರ್ ಅವರು ತಮ್ಮ ಪಕ್ಷದ ಪುನಶ್ಚೇತನದ ಕಸರತ್ತನ್ನು ಪ್ರಾರಂಭಿಸಲು ಆಯ್ಕೆ ಮಾಡಿಕೊಂಡಿದ್ದು, ಪಕ್ಷವನ್ನು ಪುನರ್ನಿರ್ಮಿಸುವ ಪ್ರಯತ್ನದ ಮೊದಲ ಭಾಗವಾಗಿದೆ.
ಭೋಪಾಲ್ನಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನ್ಯಾಶನಲ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) 70,000 ಕೋಟಿ ರೂಪಾಯಿಗಳ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಯೋಲಾ ರ್ಯಾಲಿಯಲ್ಲಿ ಮಾತನಾಡಿದ ಶರದ್ ಪವಾರ್, ಎನ್ಸಿಪಿ ಬಂಡಾಯ ನಾಯಕರು ತಮ್ಮ ವಯಸ್ಸಿನ ಬಗ್ಗೆ ಪ್ರಸ್ತಾಪಿಸಬೇಡಿ. ಪಕ್ಷದ ಕಾರ್ಯಕರ್ತರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.
ಭುಜಬಲ್ ಅವರ ಹೆಸರನ್ನು ಉಲ್ಲೇಖಿಸದೆ, ನಾನು ಕೆಲವರನ್ನು ನಂಬಿ ತಪ್ಪು ಮಾಡಿದ್ದೇನೆ. ಆದರೆ, ತಪ್ಪನ್ನು ಪುನರಾವರ್ತಿಸುವುದಿಲ್ಲ. ಅದಕ್ಕಾಗಿ ಕ್ಷಮೆ ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದರು.
ರ್ಯಾಲಿಗೂ ಮುನ್ನ ಸಂಸತ್ ಸದಸ್ಯೆಯಾಗಿರುವ ಅವರ ಪುತ್ರಿ ಸುಪ್ರಿಯಾ ಸುಳೆ ತನ್ನ ತಂದೆ ಮಳೆಯಲ್ಲಿ ಒದ್ದೆಯಾಗಿ ವಾಹನದಲ್ಲಿ ಕುಳಿತಿರುವ ಫೊಟೋವನ್ನು ಹಂಚಿಕೊಂಡಿದ್ದಾರೆ.
Advertisement