‘ಅನಗತ್ಯ ಪ್ರಯಾಣ ತಪ್ಪಿಸಿ’: ನಿರಂತರ ಮಳೆ ಹಿನ್ನೆಲೆ ಜನತೆಗೆ ಉತ್ತರಾಖಂಡ ಸಿಎಂ ಧಾಮಿ ಮನವಿ
ಡೆಹ್ರಾಡೂನ್ (ಉತ್ತರಾಖಂಡ): ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅನಗತ್ಯ ಪ್ರಯಾಣ ತಪ್ಪಿಸುವಂತೆ ಜನತೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬುಧವಾರ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, “ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜನತೆ ಮತ್ತು ಯಾತ್ರಾರ್ಥಿಗಳು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯ ವಿಪತ್ತು ನಿಯಂತ್ರಣ ಕೊಠಡಿಯಿಂದ ದಿನದ 24 ಗಂಟೆಯೂ ಎಲ್ಲಾ ಜಿಲ್ಲೆಗಳ ರಸ್ತೆಗಳು ಮತ್ತು ಮಳೆಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಹೈ ಅಲರ್ಟ್ ಆಗಿರುವಂತೆ ಜಿಲ್ಲಾಡಳಿತ ಮತ್ತು ಎಸ್ಡಿಆರ್ಎಫ್ಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರೀ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ನಾಗರಿಕರ ನೆರವಿಗೆ ಆರಂಭಿಸಲಾಗಿರುವ ವಿಪತ್ತು ಪರಿಹಾರ ಸಂಖ್ಯೆಗಳನ್ನೂ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯ ಮತ್ತು ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಉತ್ತರಾಖಂಡದ ನಾಗರಿಕರಿಗೆ ಸಹಾಯ ಮಾಡಲು ನಮ್ಮ ಸರ್ಕಾರವು ವಿಪತ್ತು ಪರಿಹಾರ ಸಂಖ್ಯೆಗಳನ್ನು ನೀಡಿದೆ. ಯಾವುದೇ ಸಹಾಯಕ್ಕಾಗಿ, ನೀವು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು - 9411112985, 01352717380, 01352712685. ಇದಲ್ಲದೆ, ನೀವು ವಾಟ್ಸಾಪ್ ಸಂಖ್ಯೆ- 9411112780ಗೂ ಕೂಡ ಸಂದೇಶ ಕಳುಹಿಸಬಹುದು ಎಂದು ತಿಳಿಸಿದ್ದಾರೆ.