ಬಿಹಾರ ಪೊಲೀಸರ ಲಾಠಿ ಚಾರ್ಜ್‌ ನಿಂದಲೇ ನಮ್ಮ ನಾಯಕ ಸಾವು: ಬಿಜೆಪಿ ಆರೋಪ

ಶಿಕ್ಷಕರ ನೇಮಕಾತಿ ನಿಯಮಾವಳಿ ವಿರೋಧಿಸಿ ಗುರುವಾರ ಪಾಟ್ನಾದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಈ ವೇಳೆ ಬಿಜೆಪಿ ನಾಯಕರೊಬ್ಬರು ಮೃತಪಟ್ಟಿದ್ದಾರೆ.
ಬಿಹಾರ ಪೊಲೀಸರ ಲಾಠಿ ಚಾರ್ಜ್‌
ಬಿಹಾರ ಪೊಲೀಸರ ಲಾಠಿ ಚಾರ್ಜ್‌

ಪಾಟ್ನಾ: ಶಿಕ್ಷಕರ ನೇಮಕಾತಿ ನಿಯಮಾವಳಿ ವಿರೋಧಿಸಿ ಗುರುವಾರ ಪಾಟ್ನಾದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಈ ವೇಳೆ ಬಿಜೆಪಿ ನಾಯಕರೊಬ್ಬರು ಮೃತಪಟ್ಟಿದ್ದಾರೆ.

ಜೆಹಾನಾಬಾದ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೊಲೀಸರ "ಕ್ರೂರ" ಲಾಠಿ ಚಾರ್ಜ್‌ನಿಂದಲೇ ಮೃತಪಟ್ಟಿದ್ದಾರೆ ಎಂದು ಕೇಸರಿ ಪಕ್ಷ ಆರೋಪಿಸಿದೆ.

ಬಿಹಾರ ಸರ್ಕಾರದ ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ ಆಯೋಜಿಸಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೋಗುತ್ತಿದ್ದ ಬಿಜೆಪಿ ನಾಯಕರನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿ, ಜಲಫಿರಂಗಿ ಹಾರಿಸಿದ್ದಾರೆ. ಜತೆಗೆ ಲಾಠಿ ಚಾರ್ಜ್ ನಡೆಸಿದ್ದಾರೆ. 

ಬಿಜೆಪಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಬಿಹಾರ ಸರ್ಕಾರ, ಜೆಹಾನಾಬಾದ್ ಜಿಲ್ಲೆಯ ನಿವಾಸಿ ವಿಜಯ್ ಕುಮಾರ್ ಸಿಂಗ್ ಅವರು "ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅವರನ್ನು ತಕ್ಷಣ ರಾಜ್ಯದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ PMCH ಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ" ಎಂದು ಪಾಟ್ನಾ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

"ಬಿಹಾರ ಪೊಲೀಸರಿಂದ ಪಾಟ್ನಾದಲ್ಲಿ ಬಂಧಿಸಲ್ಪಟ್ಟ ಜೆಹಾನಾಬಾದ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಸಿಂಗ್ ಅವರು ಪೊಲೀಸರ ಕ್ರೂರ ಲಾಠಿ ಚಾರ್ಜ್‌ನಲ್ಲಿ ಸಾವನ್ನಪ್ಪಿದ್ದಾರೆ" ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com