ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ: ಸರ್ಕಾರ ಕ್ರಮ ಕೈಗೊಳ್ಳದಿದ್ದರೇ ನಾವು ಕೈಗೊಳ್ಳುತ್ತೇವೆ- ಸುಪ್ರೀಂ ಕೋರ್ಟ್ ಎಚ್ಟರಿಕೆ

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೈರಲ್ ವಿಡಿಯೋ ಕುರಿತಂತೆ ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವೇ ಕೈಗೊಳ್ಳುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೈರಲ್ ವಿಡಿಯೋ ಕುರಿತಂತೆ ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವೇ ಕೈಗೊಳ್ಳುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, 'ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವೇ ಕೈಗೊಳ್ಳುತ್ತೇವೆ.  ಸರ್ಕಾರ ಕ್ರಮ ಕೈಗೊಳ್ಳುವಂತೆ ಮತ್ತು ಈ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೇಳಿದ್ದಾರೆ.

ಅಂತೆಯೇ ಘಟನೆಯನ್ನು ಕಟು ಶಬ್ದಗಳಿಂದ ಖಂಡಿಸಿರುವ ಸುಪ್ರೀಂ ಕೋರ್ಟ್, ಮಹಿಳೆಯ ಮೇಲಿನ ದೌರ್ಜನ್ಯದ ದೃಶ್ಯಗಳು "ಸಾಂವಿಧಾನಿಕ ವೈಫಲ್ಯ" ವನ್ನು ತೋರಿಸಿದೆ ಎಂದು ಹೇಳಿದೆ. ಅಂತೆಯೇ ನ್ಯಾಯಾಲಯ ಜುಲೈ 28 ರಂದು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.

"ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋಗಳ ಬಗ್ಗೆ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ನಾವು ನಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸುತ್ತಿದ್ದೇವೆ. ಇದು ಸರ್ಕಾರ ಕ್ರಮಕೈಗೊಳ್ಳುವ ಸಮಯವಾಗಿದೆ. ಇದು ಸ್ವೀಕಾರಾರ್ಹವಲ್ಲ. ಸರ್ಕಾರವು ಕ್ರಮಕೈಗೊಳ್ಳದಿದ್ದರೆ, ನಾವು ಮಾಡುತ್ತೇವೆ. ಅಂತಹ ಹಿಂಸಾಚಾರಕ್ಕಾಗಿ ದುಷ್ಕರ್ಮಿಗಳನ್ನು ದಾಖಲಿಸಲು ಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. ಮಾಧ್ಯಮಗಳು ಮತ್ತು ದೃಶ್ಯಗಳಲ್ಲಿ ಚಿತ್ರಿಸಿರುವುದು ಒಟ್ಟಾರೆಯಾಗಿ ಸಾಂವಿಧಾನಿಕ ಉಲ್ಲಂಘನೆ ತೋರಿಸುತ್ತದೆ ಎಂದು ಡಿವೈ ಚಂದ್ರಚೂಡ್ ಹೇಳಿದರು.

ಮಣಿಪುರ ಹಿಂಸಾಚಾರ ಮುಂದುವರೆದಿರುವಂತೆಯೇ ಇತ್ತ ಮತ್ತೊಂದು ಘಟನೆಯಲ್ಲಿ ಮೂವರು ಮಹಿಳೆಯರನ್ನು ಗುಂಪೊಂದು ಬೆತ್ತಲೆ ಮಾಡಿ ಅವರನ್ನು ಮೆರವಣಿಗೆ ಮಾಡಿದ್ದರು. ಅಲ್ಲದೆ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದು ಮಾತ್ರವಲ್ಲದೇ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಬೆತ್ತಲೆ ಮೆರವಣಿಗೂ ಮೊದಲು ಮಹಿಳೆಯರ ಸಹೋದರರನ್ನು ಗುಂಪು ಹತ್ಯೆ ಮಾಡಿದೆ ಎಂದು ಹೇಳಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಹೇಳಿಕೆಯ ಪ್ರಕಾರ, ರಾಜ್ಯದ ರಾಜಧಾನಿ ಇಂಫಾಲ್‌ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ನಡೆದಿದೆ. ಈ ಭಯಾನಕ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆದ ಒಂದು ದಿನದ ನಂತರ ಮಣಿಪುರ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಹೆರಾದಾಸ್ (32) ಎಂಬಾತನನ್ನು ತೌಬಲ್ ಜಿಲ್ಲೆಯಿಂದ ಬಂಧಿಸಲಾಗಿದ್ದು, ವೈರಲ್ ವಿಡಿಯೋದಲ್ಲಿ ಹಸಿರು ಟೀ ಶರ್ಟ್ ಧರಿಸಿದ್ದ ಗುರುತಿನ ಅಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಮೇ 3 ರಂದು ಮಣಿಪುರದಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ'ಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com