ನವದೆಹಲಿ: ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಮೂಡಿದ ಬಳಿಕ ಶರದ್ ಪವಾರ್ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಾಗಾಲ್ಯಾಂಡ್ನಲ್ಲಿ 7 ಎನ್ಸಿಪಿ ಶಾಸಕರು ಅಜಿತ್ ಪವಾರ್ ಶಿಬಿರಕ್ಕೆ ತೆರಳಿದ್ದಾರೆ.
ಶಾಸಕರ ಜತೆಗೆ ಪದಾಧಿಕಾರಿಗಳೂ ಅಜಿತ್ ಪವಾರ್ ಅವರನ್ನು ಬೆಂಬಲಿಸಲಿದ್ದಾರೆ. ನಾಗಾಲ್ಯಾಂಡ್ ರಾಜ್ಯಾಧ್ಯಕ್ಷ ವಂತುಂಗ್ ಓಡಿಯೊ ದೆಹಲಿಗೆ ಬಂದು ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಮಹಾರಾಷ್ಟ್ರ ಅಧ್ಯಕ್ಷ ಸುನಿಲ್ ತತ್ಕರೆ ಅವರನ್ನು ಭೇಟಿಯಾದರು ಎಂದು ಎನ್ಸಿಪಿ ಅಜಿತ್ ಪವಾರ್ ಬಣದ ರಾಷ್ಟ್ರೀಯ ವಕ್ತಾರ ಬ್ರಜ್ಮೋಹನ್ ಶ್ರೀವಾಸ್ತವ ತಿಳಿಸಿದ್ದಾರೆ. ನಾಗಾಲ್ಯಾಂಡ್ ಎನ್ಸಿಪಿಯ ನಿರ್ಧಾರದ ಬಗ್ಗೆ ಅವರು ಮಾಹಿತಿ ನೀಡಿದರು. ಒಡಿಯೊ ಅವರು 7 ಶಾಸಕರು ಸೇರಿದಂತೆ ಎಲ್ಲಾ ಪದಾಧಿಕಾರಿಗಳಿಗೆ ಬೆಂಬಲದ ಅಫಿಡವಿಟ್ಗಳನ್ನು ಹಸ್ತಾಂತರಿಸಿದರು.
ಪಕ್ಷವನ್ನು ಬಲಪಡಿಸುವ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ಪ್ರಫುಲ್ ಪಟೇಲ್ ಭರವಸೆ ನೀಡಿದರು. ನಾಗಾಲ್ಯಾಂಡ್ನ ರಾಜ್ಯ ಕಾರ್ಯಕಾರಿಣಿ ಮತ್ತು ಜಿಲ್ಲಾ ಘಟಕಕ್ಕೂ ಮೊದಲಿನಂತೆ ಕೆಲಸ ಮಾಡುವಂತೆ ಪ್ರಫುಲ್ ಪಟೇಲ್ ಸೂಚನೆ ನೀಡಿದ್ದಾರೆ.
ಜುಲೈ 2ರಂದು ಅಜಿತ್ ಪವಾರ್ ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ಬಂಡಾಯವೆದ್ದಿದ್ದು ಎಂಟು ಎನ್ಸಿಪಿ ಶಾಸಕರೊಂದಿಗೆ ಶಿವಸೇನೆ (ಶಿಂಧೆ ಬಣ)-ಬಿಜೆಪಿ ಸರ್ಕಾರಕ್ಕೆ ಸೇರಿದ್ದರು. ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಅಜಿತ್ ಪವಾರ್ ಅವರ ಈ ಹೆಜ್ಜೆಯಿಂದ ಎನ್ಸಿಪಿ ಎರಡು ಬಣಗಳಾಗಿ ವಿಭಜನೆಯಾಯಿತು.
ಡಿಸಿಎಂ ಆದ ಬೆನ್ನಲ್ಲೇ ಅಜಿತ್ ಪವಾರ್ ಮೊದಲ ಪತ್ರಿಕಾಗೋಷ್ಠಿ ನಡೆಸಿ, ಎನ್ ಸಿಪಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ ನಮ್ಮಲ್ಲೇ ಉಳಿಯುತ್ತದೆ ಎಂದು ಹೇಳಿದ್ದರು.
Advertisement