ಮಣಿಪುರ: ದುಷ್ಕರ್ಮಿಗಳು ನನ್ನ ಪತ್ನಿ ಮೇಲೆ ಮೃಗಗಳಂತೆ ಮೇಲೆರಗಿದರು; ಸಂತ್ರಸ್ಥ ಮಹಿಳೆಯ ಪತಿ

ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಇದೀಗ ಸಂತ್ರಸ್ಥೆಯ ಕುಟುಂಬಸ್ಥರು ಕೂಡ ಇದೀಗ ಧೈರ್ಯವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದು, ದುಷ್ಕರ್ಮಿಗಳು ನನ್ನ ಪತ್ನಿ ಮೇಲೆ ಮೃಗಗಳಂತೆ ಮೇಲರಗಿದರು ಎಂದು ಸಂತ್ರಸ್ಥ ಮಹಿಳೆಯ ಪತಿ ಹೇಳಿದ್ದಾರೆ.
ಮಣಿಪುರ ಸಂತ್ರಸ್ಥೆಯ ಪತಿ
ಮಣಿಪುರ ಸಂತ್ರಸ್ಥೆಯ ಪತಿ
Updated on

ಇಂಫಾಲ: ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಇದೀಗ ಸಂತ್ರಸ್ಥೆಯ ಕುಟುಂಬಸ್ಥರು ಕೂಡ ಇದೀಗ ಧೈರ್ಯವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದು, ದುಷ್ಕರ್ಮಿಗಳು ನನ್ನ ಪತ್ನಿ ಮೇಲೆ ಮೃಗಗಳಂತೆ ಮೇಲರಗಿದರು ಎಂದು ಸಂತ್ರಸ್ಥ ಮಹಿಳೆಯ ಪತಿ ಹೇಳಿದ್ದಾರೆ.

ದುಷ್ಕರ್ಮಿಗಳು ನಮ್ಮ ಮನೆಯ ಮಹಿಳೆಯರನ್ನು ಎಳೆದೊಯ್ಯುವಾಗ ಸ್ಥಳದಲ್ಲೇ ಇದ್ದ ಪೊಲೀಸರು ದುಷ್ಕರ್ಮಿಗಳಿಂದ ಅವರನ್ನು ರಕ್ಷಿಸುವ ಯಾವುದೇ ಕೆಲಸ ಮಾಡಲಿಲ್ಲ. ಬದಲಿಗೆ ಅವರನ್ನು ದುಷ್ಕರ್ಮಿಗಳ ಬಳಿ ಬಿಟ್ಟು ಹೊರಟು ಹೋದರು. ಇದು ದುಷ್ಕರ್ಮಿಗಳು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲು ಧೈರ್ಯ ನೀಡಿತು. ಗುಂಪೊಂದು ಅವರನ್ನು ಸುತ್ತುವರಿದು ಅವರನ್ನು ಹೊಲಕ್ಕೆ ಎಳೆದೊಯ್ದು ಅವರೆಲ್ಲರೂ ಒಬ್ಬರ ಬಳಿಕ ಒಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಸಂತ್ರಸ್ಥೆಯ ಪತಿ ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ ವಿಡಿಯೋದ ಆರೋಪಿ ತಕ್ಷಣ ಬಂಧನ, ಆದರೆ ಹಳೆಯ ಎಫ್ಐಆರ್ ನಲ್ಲಿ ಕರ್ತವ್ಯ ಲೋಪ ಪತ್ತೆ: ಸಿಎಂ ಬಿರೇನ್
 
ಮೇ 4 ರಂದು, ಮಣಿಪುರದಲ್ಲಿ ಕಣಿವೆಯ ಬಹುಸಂಖ್ಯಾತ ಮೈತೇಯಿ ಮತ್ತು ಬೆಟ್ಟದ ಬಹುಸಂಖ್ಯಾತ ಕುಕಿ ಬುಡಕಟ್ಟು ಜನಾಂಗದವರ ನಡುವೆ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈಸ್‌ಗಳ ಬೇಡಿಕೆಯ ಮೇಲೆ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಈ ಘಟನೆ ನಡೆದಿದೆ. 15 ದಿನಗಳ ನಂತರ ಎಫ್‌ಐಆರ್ ದಾಖಲಿಸಲಾಗಿದ್ದು, ಆದರೆ ಭಯಾನಕ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಿನ್ನೆಯಷ್ಟೇ ಮೊದಲ ಬಂಧನ  ಮಾಡಲಾಯಿತು, ಇದು ರಾಷ್ಟ್ರವ್ಯಾಪಿ ಭಾರೀ ಆಕ್ರೋಶವನ್ನು ಉಂಟುಮಾಡಿತು.

ಮೇ 18 ರಂದು ಪೊಲೀಸ್ ದೂರಿನಲ್ಲಿ, ಇಬ್ಬರು ಮಹಿಳೆಯರಲ್ಲಿ ಕಿರಿಯ ಮಹಿಳೆಯನ್ನು "ಹಗಲು ಹೊತ್ತಿನಲ್ಲಿ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ" ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ ಎಂದು ಇಂಡಿಯವ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ದೂರಿನ ಪ್ರಕಾರ, ತಮ್ಮ ಗ್ರಾಮದ ಮೇಲೆ ದಾಳಿ ನಡೆಸಿದಾಗ ಗುಂಪಿನಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಗುಂಪಿನಲ್ಲಿ ಸಂತ್ರಸ್ಥ ಮಹಿಳೆಯರು ಇದ್ದರು. ಗುಂಪನ್ನು ಪೊಲೀಸರು ರಕ್ಷಿಸಿದರು. ಆದರೆ ಆ ಗುಂಪನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಅವರನ್ನು ತಡೆದು ಮಹಿಳೆಯರನ್ನು ಎಳೆದೊಯ್ದರು. ಮೂವರು ಮಹಿಳೆಯರು ಅಂದರೆ 50 ರ ಹರೆಯದ ಹಿರಿಯ ಮಹಿಳೆಯನ್ನು ಸೇರಿದಂತೆ ಒಟ್ಟು ಮೂವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲಾಯಿತು. ಅಂತೆಯೇ ಕಿರಿಯ ಮಹಿಳೆಯ ತಂದೆ ಮತ್ತು ಸಹೋದರನನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಪ್ರಕಾರ ಆಕೆಯ ಸಹೋದರನನ್ನು ಕೊಲೆ ಮಾಡಲಾಗಿದೆ. 19 ವರ್ಷದ ಕಿರಿಯ ವ್ಯಕ್ತಿ ತನ್ನ ಸಹೋದರಿಯನ್ನು ದುಷ್ಕರ್ಮಿಗಳಿಂದ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾಗ ಆತನನ್ನು ಕೊಲ್ಲಲಾಗಿದೆ. ಇದೇ ವಿಚಾರವಾಗಿ ಕಿರಿಯ ಮಹಿಳೆ ಗುರುವಾರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡುತ್ತಾ,  "ನಮ್ಮ ಹಳ್ಳಿಯ ಮೇಲೆ ದಾಳಿ ನಡೆಸುತ್ತಿದ್ದ ಗುಂಪಿನೊಂದಿಗೆ ಪೊಲೀಸರು ಇದ್ದರು. ಪೊಲೀಸರು ನಮ್ಮನ್ನು ಮನೆಯ ಸಮೀಪದಿಂದ ಎತ್ತಿಕೊಂಡು, ಗ್ರಾಮದಿಂದ ಸ್ವಲ್ಪ ದೂರದಲ್ಲಿ ನಮ್ಮನ್ನು ಕರೆದೊಯ್ದು ಜನಸಮೂಹದೊಂದಿಗೆ ರಸ್ತೆಯಲ್ಲಿ ಬಿಟ್ಟರು. ನಮ್ಮನ್ನು ಪೊಲೀಸರು ಅವರಿಗೆ ನೀಡಿದ್ದಾರೆ" ಎಂದು ಮಹಿಳೆ ತನ್ನ ಗಂಡನ ಮನೆಯಿಂದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಫೋನ್‌ನಲ್ಲಿ ತಿಳಿಸಿದ್ದಾರೆ.

ದುಷ್ಕರ್ಮಿಗಳು ನಮ್ಮನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ನಂತರ ಸಾಮೂಹಿಕ ಅತ್ಯಾಚಾರ ನಡೆಸಿದರು. ಬಳಿಕ ಅವರಿಂದ ತಪ್ಪಿಸಿಕೊಂಡು ನಮ್ಮ ಪ್ರಾಣ ಉಳಿಸಿಕೊಂಡೆವು. ಇನ್ನು ಆ ಕರಾಳ ಘಟನೆಯ ವಿಡಿಯೋಗಳು ಇಂಟರ್ನೆಟ್ ನಲ್ಲಿ ಹರಿದಾಡಿರುವ ಕುರಿತು ತಮಗೆ ಮಾಹಿತಿ ಇಲ್ಲ. ಮಣಿಪುರದಲ್ಲಿ ಇಂಟರ್ನೆಟ್ ಇಲ್ಲ, ಹೀಗಾಗಿ ನಮಗೆ ಗೊತ್ತಿಲ್ಲ" ಎಂದು ಅವರು ಹೇಳಿದರು.

ಇನ್ನು ಬೆತ್ತಲೆ ಮೆರವಣಿಗೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ಈ ವರೆಗೂ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com