ಲಖನೌ: ಟೊಮೆಟೊ ಹಣದುಬ್ಬರವನ್ನು ತಪ್ಪಿಸಲು ಯಾವ ಮಾರ್ಗಗಳಿವೆ? ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ ತನಗೆ ತಾನೇ ಟೊಮೆಟೊ ಬೆಲೆ ಕಡಿಮೆಯಾಗುತ್ತದೆ ಎಂದು ಉತ್ತರ ಪ್ರದೇಶದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಪೋಷಣೆ ರಾಜ್ಯ ಸಚಿವೆ ಪ್ರತಿಭಾ ಶುಕ್ಲಾ ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಬೃಹತ್ ವೃಕ್ಷ ನೆಡುವ ಕಾರ್ಯಕ್ರಮದ ಸಚಿವೇ ಈ ಮಾತುಗಳನ್ನು ಆಡಿದ್ದಾರೆ. 'ಟೊಮೆಟೋ ದುಬಾರಿಯಾಗಿದ್ದರೆ ಮನೆಯಲ್ಲೇ ಬೆಳೆಯಬೇಕು. ನೀವು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ, ಅನಿವಾರ್ಯವಾಗಿ ಬೆಲೆ ಕುಸಿಯುತ್ತದೆ. ನೀವು ಟೊಮೆಟೊ ಬದಲಿಗೆ ನಿಂಬೆ ಹಣ್ಣು ತಿನ್ನಬಹುದು. ಯಾರೂ ಟೊಮ್ಯಾಟೊ ತಿನ್ನದಿದ್ದರೆ, ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಯುಪಿ ಸಚಿವೆಯ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಸಾಹಿ ಗ್ರಾಮದ ನ್ಯೂಟ್ರಿಷನ್ ಗಾರ್ಡನ್ ಉದಾಹರಣೆ ನೀಡಿದ ಅವರು, ಈ ಹಣದುಬ್ಬರಕ್ಕೆ ಪರಿಹಾರವೆಂದರೆ ಮನೆಯಲ್ಲಿ ಟೊಮೆಟೊ ಬೆಳೆಸುವುದು. ನಾವು ಅಸಾಹಿ ಗ್ರಾಮದಲ್ಲಿ ನ್ಯೂಟ್ರಿಷನ್ ಗಾರ್ಡನ್ ಮಾಡಿದ್ದೇವೆ. ಹಳ್ಳಿಯ ಮಹಿಳೆಯರು ನ್ಯೂಟ್ರಿಷನ್ ಗಾರ್ಡನ್ ಮಾಡಿದ್ದೇವೆ. ಅದರಲ್ಲಿ ಟೊಮ್ಯಾಟೊ ಕೂಡ ನೆಡಬಹುದು ಎಂದು ಸಚಿವೆ ಶುಕ್ಲಾ ಹೇಳಿದ್ದಾರೆ. ಈ ಹಣದುಬ್ಬರಕ್ಕೆ ಪರಿಹಾರವಿದೆ. ಇದು ಹೊಸ ವಿಷಯವಲ್ಲ. ಟೊಮೆಟೊ ಯಾವಾಗಲೂ ದುಬಾರಿಯಾಗಿದೆ. ನೀವು ಟೊಮೆಟೊ ತಿನ್ನದಿದ್ದರೆ ನಿಂಬೆಹಣ್ಣು ಬಳಸಿ, ಹೆಚ್ಚು ದುಬಾರಿಯಾದುದನ್ನು ತ್ಯಜಿಸಿ ಎಂದರು.
ಇದನ್ನೂ ಓದಿ: ಟೊಮೆಟೊ ದರೋಡೆ: ದಂಪತಿ ಬಂಧನ, ಮೂರನೇ ಆರೋಪಿಗಾಗಿ ಶೋಧ
ಏತನ್ಮಧ್ಯೆ, ಟೊಮೆಟೊ ಸೇರಿದಂತೆ 22 ಅಗತ್ಯ ಆಹಾರ ಪದಾರ್ಥಗಳ ದೈನಂದಿನ ಬೆಲೆಯನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಮೇಲ್ವಿಚಾರಣೆ ಮಾಡುತ್ತದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.
ಪ್ರಸ್ತುತ ಟೊಮೆಟೊ ಬೆಲೆ ಏರಿಕೆಯನ್ನು ತಡೆಯಲು ಮತ್ತು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು, ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯ ಅಡಿಯಲ್ಲಿ ಟೊಮೆಟೊಗಳನ್ನು ಖರೀದಿಸಲು ಪ್ರಾರಂಭಿಸಿದೆ. ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಟೊಮೆಟೊ ಸಿಗುವಂತೆ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ (ಎನ್ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ (ನಾಫೆಡ್) ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ನಿರಂತರವಾಗಿ ಟೊಮೆಟೊಗಳನ್ನು ಖರೀದಿಸಿ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಚೌಬೆ ಹೇಳಿದರು.
Advertisement