ಒಡಿಶಾ ರೈಲು ದುರಂತ: ಎಂಜಿನ್ ಬದಲಾಗಿದ್ದರಿಂದ ನಾವು ಬದುಕಿದ್ದೇವೆ; ನಟ ಪ್ರೀತಮ್ ಬಿಚ್ಚಿಟ್ಟ ದುರಂತದ ಕ್ಷಣ
ಒಡಿಶಾದ ಬಾಲಸೋರ್ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತದಲ್ಲಿ ಸಿಲುಕಿದ್ದವು.
ಕರ್ನಾಟಕದ ಅದರಲ್ಲೂ ಚಿಕ್ಕಮಗಳೂರಿನ ಜೈನ ಸಮುದಾಯದವರು ಜಾರ್ಖಂಡ್ನಲ್ಲಿರುವ ಶಿಕರ್ಜಿಗೆ ಯಾತ್ರೆ ಹೊರಟಿದ್ದರು. ಇನ್ನು ದುರಂತದಲ್ಲಿ ಅದೃಷ್ಟವಶಾತ್ ಅವರೆಲ್ಲೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ರೈಲು ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದವರ ಪೈಕಿ ಕಿರುತೆರೆ ಚಿತ್ರನಟ ಪ್ರೀತಮ್ ಮಕ್ಕಿಹಾಳಿ ಕೂಡ ಸೇರಿದ್ದಾರೆ. ಮಾಂಗಲ್ಯಂ ತಂತುನಾನೇನ ಎಂಬ ಧಾರಾವಾಹಿಯಲ್ಲಿ ನಟಿಸಿದ್ದ ಪ್ರೀತಮ್ ಅವರ ನೋಡದ ಪುಟಗಳು ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು. ಇನ್ನು ರೈಲು ದುರಂತ ಹೇಗೆ ಸಂಭವಿಸಿತು ಎಂದು ಪ್ರೀತಮ್ ಬಿಚ್ಚಿಟ್ಟಿದ್ದಾರೆ.
ಜಾರ್ಖಂಡ್ ನಲ್ಲಿರುವ ಶಿಕರ್ಜಿಗೆ ಜೈನ ಮುನಿಗಳಾದ ಮಹಿಮಾ ಸಾಗರ್ ಅವರು ಯಾತ್ರೆಯನ್ನು ಆಯೋಜಿಸಿದ್ದರು. ನಾನು ಸೇರಿದಂತೆ 110 ಯಾತ್ರಾರ್ಥಿಗಳು ಬೆಂಗಳೂರು-ಹೌರಾ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದೇವು. ಒಡಿಶಾ ಮೂಲಕ ಕೋಲ್ಕತ್ತಾಗೆ ತೆರಳಿ ಅಲ್ಲಿಂದ ಜಾರ್ಖಂಡ್ ಗೆ ಹೋಗಬೇಕಿತ್ತು. ಆದರೆ ಒಡಿಶಾದಲ್ಲಿ ದುರಂತ ಸಂಭವಿಸಿದೆ.
ಬೆಂಗಳೂರು-ಹೌರಾ ರೈಲಿನಲ್ಲಿ ಪ್ರೀತಮ್ ಹಾಗೂ ಒಟ್ಟಾರೆ ಯಾತಾರ್ಥಿಗಳಿದ್ದ ಬೋಗಿಗಳು ರೈಲಿನ ಕೊನೆಯ ಮೂರು ಬೋಗಿಗಳಾಗಿದ್ದವು. ಇನ್ನು ವಿಶಾಖಪಟ್ಟಣದಲ್ಲಿ ರೈಲು ನಿಲ್ಲಿಸಿ, ಎಂಜಿನ್ ಬದಲಿಸಲಾಯಿತು. ಈ ವೇಳೆ ನಮ್ಮ ಬೋಗಿಗಳು ರೈಲಿನ ಮುಂಭಾಗಕ್ಕೆ ಬಂದವು. ಹೀಗಾಗಿ ನಾವು ಇಂದು ಸುರಕ್ಷಿತರಾಗಿದ್ದೇವೆ ಎಂದು ಪ್ರೀತಮ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ