ಲವ್ ಜಿಹಾದ್‌: ಮುಸ್ಲಿಂ ಅಂಗಡಿಗಳ ಬಳಿ ಕಂಡು ಬಂದ ಬೆದರಿಕೆ ಪತ್ರ, ಉತ್ತರಕಾಶಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ಅಪ್ರಾಪ್ತ ಬಾಲಕಿಯ ಅಪಹರಣ ಯತ್ನ ಘಟನೆ ಬಳಿಕ ಉತ್ತರಾಖಂಡದ ಉತ್ತರಕಾಶಿಯ ಪುರೋಲಾ ಪಟ್ಟಣದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಕಾರ್ಮಿಕ ಸಂಘಟನೆಗಳು, ಹಿಂದೂ ಘಟಕದ ಕಾರ್ಯಕರ್ತರು ಮುಸ್ಲಿಂ ಅಂಗಡಿಗಳ ಬೋರ್ಡ್‌ಗಳ ತೆರವುಗೊಳಿಸುತ್ತಿರುವುದು.
ಕಾರ್ಮಿಕ ಸಂಘಟನೆಗಳು, ಹಿಂದೂ ಘಟಕದ ಕಾರ್ಯಕರ್ತರು ಮುಸ್ಲಿಂ ಅಂಗಡಿಗಳ ಬೋರ್ಡ್‌ಗಳ ತೆರವುಗೊಳಿಸುತ್ತಿರುವುದು.

ಡೆಹ್ರಾಡೂನ್: ಅಪ್ರಾಪ್ತ ಬಾಲಕಿಯ ಅಪಹರಣ ಯತ್ನ ಘಟನೆ ಬಳಿಕ ಉತ್ತರಾಖಂಡದ ಉತ್ತರಕಾಶಿಯ ಪುರೋಲಾ ಪಟ್ಟಣದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಪುರೋಲಾ ಪ್ರದೇಶದಲ್ಲಿ ಕಳೆದ ತಿಂಗಳು 14 ವರ್ಷದ ಹಿಂದೂ ಹುಡುಗಿಯನ್ನು ಒಬ್ಬ ಮುಸ್ಲಿಂ ಮತ್ತು ಮತ್ತೋರ್ವ ಹಿಂದೂ ಯುವಕ ಅಪಹರಣ ಮಾಡಲು ಯತ್ನಿಸಿದ್ದಾರೆಂಬ ಆರೋಪಗಳು ಕೇಳಿ ಬಂದಿತ್ತು. ಸುದ್ದಿ ಬಳಿಕ ಉತ್ತರಕಾಶಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಇದರ ನಡುವೆಯೇ ಉತ್ತರಕಾಶಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಜೂನ್ 15 ರೊಳಗೆ ಅಂಗಡಿಗಳನ್ನು ಮುಚ್ಚುವಂತೆ ಬೆದರಿಕೆ ಹಾಕುವ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಅವರು, ಪುರೋಲಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರಾದೇಶಿಕ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಯ ಹೆಚ್ಚುವರಿ ತುಕಡಿಯನ್ನು ನಿಯೋಜಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯದುವಂಶಿ ಅವರು, ಮೇ 26 ರಂದು ಪುರೋಲಾದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಪೊಲೀಸರು ಹಿಂದೂ ಮತ್ತು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆಂದು ಹೇಳಿದ್ದಾರೆ.

ಉತ್ತರಕಾಶಿ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ದೀಪಕ್ ಬಿಜಲವಾನ್ ಮಾತನಾಡಿ, ಉತ್ತರಕಾಶಿ ಜಿಲ್ಲೆಯ ಗ್ರಾಮದಲ್ಲಿ ಸರಕುಗಳನ್ನು ಮಾರಾಟ ಮಾಡಲು ಜಿಲ್ಲಾ ಪಂಚಾಯಿತಿಯ ಹೊರಗಿನವರಿಗೆ ಅವಕಾಶ ನೀಡುವುದಿಲ್ಲ. ಹೊರಗಿನವರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡಬಾರದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com