ಪಿಎಸ್‌ಯುಗಳಿಂದ 2 ಲಕ್ಷಕ್ಕೂ ಹೆಚ್ಚು ಉದ್ಯೋಗ 'ಕಡಿತ', ಸರ್ಕಾರ ಯುವಕರ ಭರವಸೆಯನ್ನು ತುಳಿಯುತ್ತಿದೆ: ರಾಹುಲ್ ಗಾಂಧಿ

ಪಿಎಸ್‌ಯುಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ ಮತ್ತು ಕೆಲವು 'ಆಪ್ತ ಬಂಡವಾಳಶಾಹಿ ಸ್ನೇಹಿತರ' ಲಾಭಕ್ಕಾಗಿ ಸರ್ಕಾರವು ಲಕ್ಷಗಟ್ಟಲೆ ಯುವಕರ ಭರವಸೆಯನ್ನು ತುಳಿದುಹಾಕಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪಿಎಸ್‌ಯುಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ ಮತ್ತು ಕೆಲವು 'ಆಪ್ತ ಬಂಡವಾಳಶಾಹಿ ಸ್ನೇಹಿತರ' ಲಾಭಕ್ಕಾಗಿ ಸರ್ಕಾರವು ಲಕ್ಷಗಟ್ಟಲೆ ಯುವಕರ ಭರವಸೆಯನ್ನು ತುಳಿದುಹಾಕಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.

ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ಭಾರತದ ಹೆಮ್ಮೆ ಮತ್ತು ಉದ್ಯೋಗಕ್ಕಾಗಿ ಪ್ರತಿಯೊಬ್ಬ ಯುವಕನ ಕನಸಾಗಿದ್ದವು. ಆದರೆ, ಇಂದು ಅವು 'ಸರ್ಕಾರದ ಆದ್ಯತೆಯಾಗಿಲ್ಲ' ಎಂದು ಅವರು ದೂರಿದರು.

'ದೇಶದ ಪಿಎಸ್‌ಯುಗಳಲ್ಲಿ ಉದ್ಯೋಗಾವಕಾಶವು 2014 ರಲ್ಲಿ 16.9 ಲಕ್ಷದಿಂದ 2022 ರಲ್ಲಿ ಕೇವಲ 14.6 ಲಕ್ಷಕ್ಕೆ ಇಳಿದಿದೆ. ಪ್ರಗತಿಯಲ್ಲಿರುವ ದೇಶದಲ್ಲಿ ಉದ್ಯೋಗಗಳು ಕಡಿಮೆಯಾಗುತ್ತವೆಯೇ?. ಬಿಎಸ್‌ಎನ್ಎಲ್‌ನಲ್ಲಿ 1,81,127, ಎಸ್‌ಎಐಎಲ್‌ನಲ್ಲಿ 61,928, ಎಂಟಿಎನ್ಎಲ್‌ನಲ್ಲಿ 34,997; ಎಸ್‌ಇಸಿಎಲ್‌ನಲ್ಲಿ 29,140; ಎಫ್‌ಸಿಐನಲ್ಲಿ 28,063; ಒಎನ್‌ಜಿಸಿಯಲ್ಲಿ 21,120 ಉದ್ಯೋಗಗಳು ಕಡಿತಗೊಂಡಿವೆ' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಸುಳ್ಳು ಭರವಸೆಗಳನ್ನು ನೀಡಿದವರು, ಉದ್ಯೋಗಗಳನ್ನು ಹೆಚ್ಚಿಸುವ ಬದಲು ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ ಎಂದು ಹೇಳಿದರು.

'ಇದರೊಂದಿಗೆ, ಈ ಸಂಸ್ಥೆಗಳಲ್ಲಿ ಗುತ್ತಿಗೆ ನೇಮಕಾತಿಗಳನ್ನು ದ್ವಿಗುಣಗೊಳಿಸಲಾಗಿದೆ. ಗುತ್ತಿಗೆ ನೌಕರರನ್ನು ಹೆಚ್ಚಿಸುವುದು ಸಾಂವಿಧಾನಿಕ ಮೀಸಲಾತಿಯ ಹಕ್ಕನ್ನು ಕಸಿದುಕೊಳ್ಳುವ ಮಾರ್ಗವಲ್ಲವೇ? ಇದು ಈ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಷಡ್ಯಂತ್ರವೇ?' ಎಂದರು.

ಕೈಗಾರಿಕೋದ್ಯಮಿಗಳ ಸಾಲಮನ್ನಾ ಮತ್ತು ಪಿಎಸ್‌ಯುಗಳಿಂದ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ! ಇದು ಯಾವ ರೀತಿಯ 'ಅಮೃತ ಕಾಲ'. ಇದು ನಿಜವಾಗಿಯೂ 'ಅಮೃತ ಕಾಲ' ಆಗಿದ್ದರೆ, ಉದ್ಯೋಗಗಳು ಏಕೆ ಈ ರೀತಿ ಕಣ್ಮರೆಯಾಗುತ್ತಿವೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

'ಈ ಸರ್ಕಾರದ ಅಡಿಯಲ್ಲಿ ದೇಶವು ದಾಖಲೆಯ ನಿರುದ್ಯೋಗದೊಂದಿಗೆ ಸೆಣಸುತ್ತಿದೆ. ಏಕೆಂದರೆ, ಕೆಲವು ಆಪ್ತ ಬಂಡವಾಳಶಾಹಿ ಸ್ನೇಹಿತರ ಲಾಭಕ್ಕಾಗಿ ಲಕ್ಷಾಂತರ ಯುವಕರ ಭರವಸೆಗಳನ್ನು ತುಳಿಯಲಾಗುತ್ತಿದೆ' ಎಂದು ಆರೋಪಿಸಿದರು.

ಭಾರತದ ಪಿಎಸ್‌ಯುಗಳು ಸರಿಯಾದ ವಾತಾವರಣ ಮತ್ತು ಸರ್ಕಾರದಿಂದ ಬೆಂಬಲ ಪಡೆದರೆ, ಅವು ಆರ್ಥಿಕತೆ ಮತ್ತು ಉದ್ಯೋಗ ಎರಡನ್ನೂ ಉತ್ತೇಜಿಸಲು ಸಮರ್ಥವಾಗಿವೆ. ಪಿಎಸ್‌ಯುಗಳು ದೇಶದ ಮತ್ತು ಜನರ ಆಸ್ತಿಯಾಗಿದ್ದು, ಭಾರತದ ಪ್ರಗತಿಯ ಹಾದಿಯನ್ನು ಬಲಪಡಿಸಲು ಅವುಗಳನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com