ನವದೆಹಲಿ: ಗೋರಖ್ಪುರದ ಗೀತಾ ಪ್ರೆಸ್ ಗೆ 2021 ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಈಗ ಕಾಂಗ್ರೆಸ್-ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಇದು ಅಪಹಾಸ್ಯದ ನಿರ್ಧಾರ ಎಂದು ಹೇಳಿದ್ದಾರೆ. ಇದೊಂಥರಾ ಹೇಗಿದೆ ಎಂದರೆ ಗಾಂಧಿ ತತ್ವಗಳನ್ನು ವಿರೋಧಿಸಿದ ಗೋಡ್ಸೆ, ಸಾವರ್ಕರ್ ಮಾದರಿಗಳಿಗೆ ಪ್ರಶಸ್ತಿ ನೀಡಿದಂತಾಗಿದೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
2015 ರಲ್ಲಿ ಪ್ರಕಟಗೊಂಡ ಪುಸ್ತಕವೊಂದನ್ನು ಉಲ್ಲೇಖಿಸಿರುವ ಜೈರಾಮ್ ರಮೇಶ್, ಆ ಪುಸ್ತಕದಲ್ಲಿ ಗೀತಾ ಪ್ರೆಸ್ ಮಹಾತ್ಮಾ ಗಾಂಧಿ ಬಗ್ಗೆ ಹೊಂದಿದ್ದ ಬಿರುಸಿನ ಸಂಬಂಧವನ್ನು ಬಿಚ್ಚಿಡುತ್ತದೆ ಎಂದು ಹೇಳಿದ್ದಾರೆ.
ಭಾನುವಾರ, ಕೇಂದ್ರ ಸಂಸ್ಕೃತಿ ಸಚಿವಾಲಯವು 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಗೋರಖ್ಪುರ ಮೂಲದ ಗೀತಾ ಪ್ರೆಸ್ಗೆ "ಅಹಿಂಸಾತ್ಮಕ ಮತ್ತು ಇತರ ಗಾಂಧಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ" ನೀಡಲಾಗುವುದು ಎಂದು ಘೋಷಿಸಿತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿಯು ಗೀತಾ ಪ್ರೆಸ್ ಅನ್ನು ಪ್ರಶಸ್ತಿಗೆ ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಶಸ್ತಿ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಗೀತಾ ಪ್ರೆಸ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದರು. ರಾಜಕೀಯ ವಿವಾದಗಳ ನಡುವೆ ಅಮಿತ್ ಶಾ ಸಹ ಗೀತಾ ಪ್ರೆಸ್ ಗೆ ಅಭಿನಂದನೆ ಸಲ್ಲಿಸಿದರು. ಇನ್ನು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಈಗ ಭಾರತೀಯ ಸಂಸ್ಕೃತಿ ಮೌಲ್ಯಗಳ ವಿರುದ್ಧ ಸಮರ ಸಾರಿದೆ ಎಂದು ಆರೋಪಿಸಿದ್ದಾರೆ.
ಅದು ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವುದಿರಬಹುದು ಅಥವಾ ಗೀತಾ ಪ್ರೆಸ್ ನ ವಿರುದ್ಧ ಟೀಕೆ ಮಾಡುವುದಿರಬಹುದು ಕಾಂಗ್ರೆಸ್ ಭಾರತದ ಸಮೃದ್ಧ ಪರಂಪರೆಯ ಮೇಲೆ ಕಾಂಗ್ರೆಸ್ ಯುದ್ಧ ಸಾರಿದೆ, ಆದರೆ ಭಾರತೀಯರು ಈ ಆಕ್ರಮಣವನ್ನು ವಿರೋಧಿಸಿ ಮತ್ತು ಸಮಾನ ಆಕ್ರಮಣಶೀಲತೆಯೊಂದಿಗೆ ನಮ್ಮ ನಾಗರಿಕತೆಯ ಮೌಲ್ಯಗಳನ್ನು ಪುನಃ ಪ್ರತಿಪಾದಿಸುತ್ತಾರೆ" ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
1 ಕೋಟಿ ರೂಪಾಯಿ ನಗದು ಪ್ರಶಸ್ತಿ ಬೇಡ: ಗೀತಾ ಪ್ರೆಸ್
ಪಬ್ಲಿಕೇಶನ್ ನ ಟ್ರಸ್ಟಿಗಳ ಮಂಡಳಿಯು ಸೋಮವಾರ, ಈ ಪ್ರಶಸ್ತಿಯ ಗೌರವವನ್ನು ಸ್ವೀಕರಿಸಲು ಒಪ್ಪಿಕೊಂಡಿತು ಆದರೆ ಬಹುಮಾನದ 1 ಕೋಟಿ ರೂಪಾಯಿ ಹಣವನ್ನು ಸ್ವೀಕರಿಸಲು ನಿರಾಕರಿಸಿತು.
"ಗೀತಾ ಪ್ರೆಸ್ ಎಂದಿಗೂ ಯಾವುದೇ ರೀತಿಯ ದೇಣಿಗೆಯನ್ನು ಸ್ವೀಕರಿಸುವುದಿಲ್ಲ ಮತ್ತು ಟ್ರಸ್ಟಿ ಬೋರ್ಡ್ ಆಫ್ ದಿ ಪ್ರೆಸ್, ಪ್ರಶಸ್ತಿಯ ಗೌರವವನ್ನು ಸ್ವೀಕರಿಸಲು ಭಾನುವಾರ ಸಂಜೆ ನಿರ್ಧರಿಸಿದೆ ಆದರೆ ಯಾವುದೇ ವಿತ್ತೀಯ ಬಹುಮಾನವನ್ನು ಸ್ವೀಕರಿಸುವುದಿಲ್ಲ" ಎಂದು ಸೋಮವಾರ ಬೆಳಿಗ್ಗೆ ಗೀತಾ ಪ್ರೆಸ್ ಮ್ಯಾನೇಜರ್ ಲಾಲ್ ಮಣಿ ತ್ರಿಪಾಠಿ ಹೇಳಿದರು.
Advertisement