ಸಹರಾನ್ಪುರ: ಉತ್ತರ ಪ್ರದೇಶದ ಸಹರಾನ್ಪುರದ ಬಾಲಾಪರಾಧಿಗೃಹವೊಂದರಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ನಡೆದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ದಿನೇಶ್ ಚಂದ್ರ ಅವರು ಶನಿವಾರ ಐವರನ್ನು ಅಮಾನತುಗೊಳಿಸಿದ್ದು, ಬಾಲಾಪರಾಧಿ ಗೃಹದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಷಯ ಬೆಳಕಿಗೆ ಬಂದ ಬಳಿಕ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕೀರ್ತಿ ರಾಜ್ ಅವರು ಹೆಚ್ಚಿನ ತನಿಖೆಗಾಗಿ ಬಾಲಾಪರಾಧಿ ಗೃಹಕ್ಕೆ ತೆರಳಿದ್ದರು. ಈ ವೇಳೆ ಅಧಿಕಾರಿಗಳು ಮತ್ತು ಬಾಲಾಪರಾಧಿಗೃಹದ ಮಕ್ಕಳೊಂದಿಗೆ ಮಾತನಾಡಿದ ನಂತರ ಈ ವಿಷಯವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೇಶ್ ಚಂದ್ರ ಅವರಿಗೆ ತಲುಪಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಎಂ ಐವರನ್ನು ಅಮಾನತುಗೊಳಿಸಿದ್ದು, ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಸದ್ಯಕ್ಕೆ, ತನಿಖೆ ನಡೆಯುವವರೆಗೆ ಬಾಲಾಪರಾಧಿ ಗೃಹಕ್ಕೆ ಒಳಹೋಗುವ ಮತ್ತು ಹೊರಹೋಗುವವರ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ದೂರಿನ ಪ್ರಕಾರ ಬಾಲಾಪರಾಧಿ ಗೃಹದಲ್ಲಿ ಹೆಣ್ಣು ಮಕ್ಕಳೊಂದಿಗೆ ಅಸಭ್ಯ ವರ್ತನೆ ನಡೆದಿದೆ. ತಕ್ಷಣವೇ ಮಹಿಳಾ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಲಾಗಿದ್ದು, ತನಿಖೆಯ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಡಿಎಂ ದಿನೇಶ್ ಚಂದ್ರ ತಿಳಿಸಿದ್ದಾರೆ.
ಸರ್ಕಲ್ ಆಫೀಸರ್ (ಸಿಒ) ಮಟ್ಟದ ಅಧಿಕಾರಿಗಳು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯಾರೇ ತಪ್ಪಿತಸ್ಥರೆಂದು ಕಂಡು ಬಂದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಎಂ ಚಂದ್ರು ಹೇಳಿದ್ದಾರೆ.
Advertisement