ನವದೆಹಲಿ: ದೆಹಲಿ ಸರ್ಕಾರದ ಸಚಿವರಾದ ಕೈಲಾಶ್ ಗಹ್ಲೋಟ್ ಮತ್ತು ರಾಜಕುಮಾರ್ ಆನಂದ್ ಅವರಿಗೆ ಹೆಚ್ಚುವರಿ ಖಾತೆಗಳ ಜವಾಬ್ದಾರಿಯನ್ನು ನೀಡುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಸ್ತಾವನೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಒಪ್ಪಿಗೆ ನೀಡಿದ್ದಾರೆ.
ಹಗರಣದ ಆರೋಪ ಹೊತ್ತಿರುವ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ನಿನ್ನೆ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಸರ್ಕಾರದ ನಿರ್ವಹಣೆ ದೃಷ್ಟಿಯಿಂದ ಇಬ್ಬರು ನಾಯಕರ ಹೆಸರನ್ನು ಸಚಿವ ಸ್ಥಾನಕ್ಕೆ ಶಿಫಾರಸು ಮಾಡಲಾಗಿತ್ತು.
ಸಿಎಂ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಅವರ ಬಳಿ ಇದ್ದ 18 ಖಾತೆಗಳಲ್ಲಿ ಕೈಲಾಶ್ ಗೆಹ್ಲೋಟ್ಗೆ 8 ಖಾತೆಗಳನ್ನು ಮತ್ತು ರಾಜ್ಕುಮಾರ್ ಆನಂದ್ಗೆ 10 ಖಾತೆಗಳನ್ನು ನೀಡಲು ನಿರ್ಧರಿಸಿದ್ದರು. ಈ ಕುರಿತ ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್'ಗೆ ಕಳುಹಿಸಿದ್ದರು. ಈ ಪ್ರಸ್ತಾವನೆಗೆ ವಿಕೆ.ಸಕ್ಸೇನಾ ಅವರು ಇದೀಗ ಒಪ್ಪಿಗೆ ನೀಡಿದ್ದಾರೆ.
ಕೇಜ್ರಿವಾಲ್ ಅವರು ಸಕ್ಸೇನಾ ಅವರಿಗೆ ಕಳುಹಿಸಿದ ಪ್ರಸ್ತಾವನೆಯಂತೆ ಗೆಹ್ಲೋಟ್ ಅವರಿಗೆ ಹಣಕಾಸು, ಯೋಜನೆ, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ), ವಿದ್ಯುತ್, ಗೃಹ, ನಗರಾಭಿವೃದ್ಧಿ, ನೀರಾವರಿ ಮತ್ತು ಆಹಾರ ನಿಯಂತ್ರಣ ಮತ್ತು ನೀರಿನ ಖಾತೆಗಳನ್ನು ನೀಡಲಾಗಿದೆ.
ರಾಜ್ಕುಮಾರ್ ಆನಂದ್ ಅವರಿಗೆ ಶಿಕ್ಷಣ, ಭೂಮಿ ಮತ್ತು ಕಟ್ಟಡ, ಸೇವೆಗಳು, ಪ್ರವಾಸೋದ್ಯಮ, ಕಲೆ, ಸಂಸ್ಕೃತಿ ಮತ್ತು ಭಾಷೆ, ಕಾರ್ಮಿಕ, ಉದ್ಯೋಗ, ಆರೋಗ್ಯ ಮತ್ತು ಕೈಗಾರಿಕೆ ಖಾತೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
Advertisement